ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಇಂದು ಜರುಗುವ ಜಂಬೂಸವಾರಿ ಮೆರವಣಿಗೆ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಮೂಲಗಳ ಪ್ರಕಾರ ಭದ್ರತೆಗೆ ಐದು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮೈಸೂರಿನಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದು, ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಜಂಬೂ ಸವಾರಿ ಮೆರವಣಿಗೆ ಸಾಗುವ 'ರಾಜಪಥ'ದ ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲಿನೊಂದಿಗೆ ಸಿಸಿ ಟಿವಿ ಕ್ಯಾಮರಾದ ಮೂಲಕ ಹದ್ದಿನ ಕಣ್ಣಿಡಲಾಗುತ್ತಿದೆ. ರಾಜಮಾರ್ಗದುದ್ದಕ್ಕೂ ಇರುವ ಭದ್ರತಾ ವ್ಯವಸ್ಥೆಯನ್ನು ಅಂಬಾರಿ ಮಾರ್ಗದಲ್ಲಿ ಸಾಗುವ ಮೊಬೈಲ್ ಕಮಾಂಡ್ ಸೆಂಟರ್ ವಾಹನದಿಂದ ನಿರ್ವಹಿಸಲಾಗುತ್ತಿದೆ.
ಅಂತೆಯೇ ಭದ್ರತೆಗಾಗಿ ಸಿವಿಲ್ ಹಾಗೂ ಸಂಚಾರ ಪೊಲೀಸ್ ಸೇರಿದಂತೆ ಒಟ್ಟು 5,284 ಮಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇವರೊಂದಿಗೆ 1600 ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. ಇಮಿಡಿಯಟ್ ಬ್ಯಾಕಪ್ ಸಪೋರ್ಟ್(ಐಬಿಯುಎಸ್) ಮತ್ತು ಮೈಸೂರು ನಗರ ಕಮಾಂಡೋ ಪಡೆಯ 70 ಕಮಾಂಡೋಗಳು, ಕೆಎಸ್ಆರ್ಪಿ, ಸಿಎಆರ್ ಮತ್ತು ಡಿಎಆರ್ ಸೇರಿ ಒಟ್ಟು 57 ತುಕಡಿಗಳು, 46 ಭದ್ರತಾ ತಪಾಸಣಾ ಪಡೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
86 ಸಿಸಿ ಕ್ಯಾಮೆರಾ: ನಗರದಲ್ಲಿ ಈಗಾಗಲೇ ಅಳವಡಿಸಿರುವ 50 ಕಾಯಂ ಸಿಸಿ ಕ್ಯಾಮೆರಾಗಳ ಜತೆಗೆ ಹೆಚ್ಚುವರಿಯಾಗಿ 86 ಸಿಸಿ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಮೈಸೂರು ಅರಮನೆ, ಬನ್ನಿಮಂಟಪ ಮೈದಾನ, ಜಂಬೂಸವಾರಿ ಮೆರವಣಿಗೆ ಮಾರ್ಗ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳಲ್ಲಿ ದಿನದ 24 ಗಂಟೆಯೂ ರೆಕಾರ್ಡ್ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ದಸರಾ ಮೆರವಣಿಗೆಯು ಸಾಗುವ ಮಾರ್ಗದಲ್ಲಿ ಬಲರಾಮದ್ವಾರ ಎ.ವಿ. ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಬಂಬೂಬಜಾರ್, ಹೈವೆ ಹೊಟೇಲ್ ವೃತ್ತ , ನೆಲ್ಸನ್ ಮಂಡೇಲಾ ರಸ್ತೆ ಬನ್ನಿಮಂಟಪದ ಮುಖ್ಯದ್ವಾರ ಮಿಲೇನಿಯಂ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
5684- ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ.
1600- ಗೃಹ ರಕ್ಷಕ ದಳದ ಸಿಬ್ಬಂದಿ.
57- ಕೆಎಸ್ಆರ್ಪಿ, ಸಿಎಆರ್, ಡಿಎಆರ್ ತುಕಡಿ.
30- ಇಮಿಡಿಯಟ್ ಬ್ಯಾಕ್ ಅಪ್ ಸಪೋರ್ಟ್ ಕಮಾಂಡೋ.
23 - ಆ್ಯಂಟಿ ಸಬೋಟೆಜ್ ಚೆಕ್ ಟೀಂ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos