ಬೆಂಗಳೂರು; ಚಿನ್ನ ಗೆದ್ದ ಭದ್ರತಾ ಸಿಬ್ಬಂದಿ ಪುತ್ರ, ವಿಶ್ವ ಚಾಂಪಿಯನ್'ಶಿಪ್'ನತ್ತ ಲಗ್ಗೆ
ಬೆಂಗಳೂರು: ಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಷನ್ 2018ರಲ್ಲಿ ಬೆಂಗಳೂರಿನ ಯುವಕ ಚಿನ್ನ ಗೆದ್ದಿದ್ದು, ಇದೀಗ ವಿಶ್ವ ಚಾಂಪಿಯನ್ ಶಿಪ್ ನತ್ತ ಲಗ್ಗೆ ಇಟ್ಟಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ನಡೆದ ಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಷನ್ 2018ರಲ್ಲಿ ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ನಗರ ಸುಮಂತ್ ಎಸ್'ಸಿ ಚಿನ್ನದ ಪದಕ ಹಾಗೂ ರೂ.1 ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ.
ಐಟಿ, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಗಳನ್ನು ಹೊರತುಪಡಿಸಿ ಉತ್ತಮ ಉದ್ಯೋಗಾವಕಾಶ ನೀಡುವ ಆದರೆ, ಬಹುತೇಕವಾಗಿ ಅಜ್ಞಾತವಾಗಿರುವ ವಿಭಾಗಗಳು ಎಂಜಿನಿಯರಿಂಗ್ ನಲ್ಲಿದ್ದು, ಅವುಗಳ ಪೈಕಿ ಮೆಕ್ಯಾಟ್ರಿನಿಕ್ಸ್ ಎಂಜಿನಿಯರಿಂಗ್ ಕೂಡ ಒಂದಾಗಿದೆ. ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ ವಿಜ್ಞಾನ ಶಿಕ್ಷಣ ಕ್ಷೇತ್ರದ ಒಂದು ವಿಭಾಗವಾಗಿದ್ದು, ಇದು ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್'ನ್ನು ಸಂಯೋಜಿಸುವ ತಂತ್ರಜ್ಞಾನವಾಗಿದೆ.
10ನೇ ತರಗತಿ ತೇರ್ಗಡೆ ಹೊಂದಿದ್ದ ಸುಮಂತ್ ಕುಟುಂಬ ಕಡು ಬಡತನದ ಕುಟುಂಬವಾಗಿದ್ದು, ಇವರಿಗೆ ಮುಂದಿನ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗದೆ ನಿಸ್ಸಾಹಯಕ ಪರಿಸ್ಥಿತಿಯಲ್ಲಿತ್ತು. ಸುಮಂತ್ ಅವರ ತಂದೆ ಚಿಕ್ಕಬೆಟ್ಟಯ್ಯ ಅವರು ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಗೃಹಿಣಿಯಾಗಿದ್ದಾರೆ.
ನಗರದಲ್ಲಿರುವ ಹೆಸರಾಂತ ಕಂಪನಿಯೊಂದರಲ್ಲಿ ನೀಡಲಾಗುತ್ತಿದ್ದ 3 ವರ್ಷಗಳ ಮೆಕ್ಯಾಟ್ರಿನಿಕ್ಸ್ ತರಬೇತಿ ಕಾರ್ಯಕ್ರಮದಲ್ಲಿ ಸುಮಂತ್ ತನ್ನ ಹೆಸರನ್ನು ನೊಂದಾಯಿಸಿಕೊಂಡಿದ್ದ. ಇದರಂತೆ ಇದೇ ಕಂಪನಿಯಲ್ಲಿಯೇ ಉದ್ಯೋಗ ಕೂಡ ಪಡೆದಿದ್ದ.
ಸ್ಪರ್ಧೆ ಅತ್ಯಂತ ಕಠಿಣವಾಗಿತ್ತು. ಏಕೆಂದರೆ, ಏನನ್ನು ನಿರೀಕ್ಷಸಬೇಕೆಂಬುದೇ ನಮಗೆ ಗೊತ್ತಿರಲಿಲ್ಲ. ಮಾಡೆಲ್ ಬಗ್ಗೆಯೂ ತಿಳಿದಿರಲಿಲ್ಲ. ಎಲ್ಲವನ್ನೂ ಜೋಡಿಸಬೇಕಿತ್ತು ಎಂದು ಸುಮಂತ್ ಹೇಳಿದ್ದಾರೆ.
ಪ್ರತೀನಿತ್ಯ 10 ಗಂಟೆಗಳ ಕಾಲ ತರಬೇತಿ ಪಡೆದುಕೊಳ್ಳುತ್ತಿದ್ದೆ. ಬೆಳಿಗ್ಗೆ 8.30ರಿಂದ ಸಂಜೆ 6.30ರವರೆಗೂ ತರಬೇತಿ ಇರುತ್ತಿತ್ತು. ಭಾಗ್ಯಶ್ರೀ ಪಾಟೀಲ್ ಅವರು ನಮಗೆ ತರಬೇತಿ ನೀಡುತ್ತಿದ್ದರು.
ಸ್ಪರ್ಧೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ ಬಳಿಕ ನನ್ನ ಪೋಷಕರು ಬಹಳ ಸಂತೋಷ ಪಟ್ಟರು. ನನ್ನ ಜೀವನದಲ್ಲಿಯೇ ಮೊದಲ ಬಾರಿಗೆ ನಾನು ಚಿನ್ನದ ಪದಕವನ್ನು ಗೆದ್ದಿದ್ದೇನೆ. ನಾನು ಮನೆಗೆ ಬರುವುದಕ್ಕೂ ಮುನ್ನವೇ ಪೋಷಕರು ಸಂಬಂಧಿಕರೆಲ್ಲರನ್ನೂ ಮನೆಗೆ ಕರೆದಿದ್ದರು ಎಂದು ಸುಮಂತ್ ತಿಳಿಸಿದ್ದಾರೆ.
ನಾಲ್ಕು ದಿನಗಳ ಕಾಲ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯಲ್ಲಿ 6 ಕಠಿಣ ಟಾಸ್ಕ್ ಗಳನ್ನು ನೀಡಲಾಗಿತ್ತು. ಗೊತ್ತಿಲ್ಲದ ಟಾಸ್ಕ್ ಗಳಂತೂ ಬಹಳ ಕಷ್ಟಕರವಾಗಿದ್ದು. ಕೊಟ್ಟಿನ ಕಿಟ್ ನಲ್ಲಿ ಚಿತ್ರದಲ್ಲಿರುವಂತೆ ಜೋಡಿಸುವಂತೆ ತಿಳಿಸಿದ್ದರು ಎಂದು ಸ್ಪರ್ಧೆ ಬಗ್ಗೆ ಹೇಳಿಕೊಂಡಿದ್ದಾರೆ.
ಮುಂದಿನ ವರ್ಷ ಕಜಾನ್ ಮತ್ತು ರಷ್ಯಾದಲ್ಲಿ ವರ್ಲ್ಡ್ ಸ್ಕಿಲ್ಸ್ 2019 ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಸುಮಂತ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸ್ಪರ್ಧೆಗೆ ಕೆಲವೇ ತಿಂಗಳು ಬಾಕಿಯಿರುವ ಹಿನ್ನಲೆಯಲ್ಲಿ ಸುಮಂತ್ ಅವರು ಮತ್ತಷ್ಟು ತರಬೇತಿ ಪಡೆಯುತ್ತಿದ್ದಾರೆ.
ಮತ್ತೆ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದೇನೆ. ನನ್ನ ಪೋಷಕರು ಹೆಮ್ಮೆ ಪಡುವಂತೆ ಮಾಡಬೇಕೆಂದು ಸುಮಂತ್ ಹೇಳಿದ್ದಾರೆ.
6 ರಾಜ್ಯಗಳ ಪೈಕಿ ಸುಮಂತ್ 14ನೇ ಸ್ಪರ್ಧಾಳು ಆಗಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಕಂಪನಿಗಳು ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿ ಕರ್ನಾಟಕ 7 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಸೇರಿ ಒಟ್ಟು 16 ಪದಕಗಳನ್ನ ಗೆದ್ದುಕೊಂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos