ಚಾಮರಾಜನಗರ: ಕೊಳ್ಳೇಗಾಲ ಮತ್ತು ಚಾಮರಾಜನಗರ ನಗರಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಚಿವ ಪುಟ್ಟರಂಗ ಶೆಟ್ಟಿಗೆ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಚಾಮರಾಜನಗರ ನಗರಸಭೆಯ ಒಟ್ಟು 31 ವಾರ್ಡ್ ಗಳ ಪೈಕಿ ಬಿಜೆಪಿ 15 ವಾರ್ಡ್ ಗಳನ್ನು ಗೆಲ್ಲುವ ಮೂಲಕ ಅತೀದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ 8 ಸ್ಥಾನವನ್ನು ಪಡೆದಿದ್ದು, 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಉಳಿದಂತೆ ಎಸ್ಡಿಪಿಐ 6, ಬಿಎಸ್ಪಿ 1 ಮತ್ತು ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಇಲ್ಲಿ ಜಯಗಳಿಸಿದ್ದಾರೆ. 15 ಸ್ಥಾನ ಗಳಿಸಿರುವ ಬಿಜೆಪಿಗೆ ಅಧಿಕಾರಕ್ಕೇರಲು ಇನ್ನೂ 1 ಸ್ಥಾನದ ಅವಶ್ಯಕತೆ ಇದೆ. ಹೀಗಾಗಿ ಎರಡನೇ ಬಾರಿಗೆ ಚಾಮರಾಜನಗರ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಂತಾಗಿದೆ. ಹಾಲಿ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹೀನಾಯ ಸ್ಥಿತಿ ಅನುಭವಿಸಿದ್ದು ಸಚಿವ ಸಿ.ಪುಟ್ಟರಂಗಶೆಟ್ಟಿ ಭಾರೀ ಮುಖಭಂಗ ಅನುಭವಿಸಿದ್ದಾರೆ.
ಇತ್ತ ಕೊಳ್ಳೆಗಾಲದಲ್ಲೂ ಇದೇ ಪರಿಸ್ಥಿತಿ ತಲೆದೋರಿದ್ದು, ಕೊಳ್ಳೇಗಾಲ ನಗರಸಭೆಯ 30 ಸ್ಥಾನಗಳ ಫಲಿತಾಂಶ ಹೊರ ಬಂದಿದೆ. ಇವುಗಳಲ್ಲಿ 11 ಸ್ಥಾನಗಳ ಪಡೆದ ಕಾಂಗ್ರೆಸ್ ಪ್ರಥಮ ಸ್ಥಾನ ಪಡೆದು ಕೊಂಡಿದ್ದರೆ, ಬಿಎಸ್ ಪಿ 9 ಸ್ಥಾನ ಪಡೆದು ಕೊಳ್ಳುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದೆ. ಉಳಿದಂತೆ ಬಿಜೆಪಿ 6, ಪಕ್ಷೇತರವಾಗಿ 4 ಮಂದಿ ಆಯ್ಕೆಯಾಗಿ ಅತಂತ್ರ ನಗರಸಭೆ ನಿರ್ಮಾಣ ಆಗಿದೆ. ಕಳೆದ ಬಾರಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವ ಮೂಲಕ ಇಲ್ಲಿ ಅಧಿಕಾರ ನಡೆಸಿತ್ತು.
ಈ ಬಾರಿ ಕಾಂಗ್ರೆಸ್ ಬರೊಬ್ಬರಿ 9 ಸ್ಥಾನ ಕಳೆದುಕೊಳ್ಳುವ ಮೂಲಕ ಮುಖಭಂಗ ಅನುಭವಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಎಸ್ ಪಿ ಒಟ್ಟು ಸೇರಿ ಮೈತ್ರಿ ಅಧಿಕಾರ ನಡೆಸುವ ಸಾಧ್ಯತೆ ದಟ್ಟವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos