ಶಿವಮೊಗ್ಗ: ಮಹಾನಗರ ಪಾಲಿಕೆ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸರ್ಕಾರ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದು, ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ (ಮಹಿಳೆ) ಮತ್ತು ಉಪಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಮೀಸಲಾತಿ ಆಧಾರದಲ್ಲಿ ಬಿಜೆಪಿ ಪಕ್ಷದಲ್ಲಿ ಆಟೋ ಚಾಲಕನ ಪತ್ನಿಯಾಗಿರುವ ಲತಾ ಗಣೇಶ್ ಅವರಿದ್ದಾರೆ. ಹಾಗಾಗಿ ಅವರಿಗೆ ಮೇಯರ್ ಸ್ಥಾನ ಎಂಬುದು ಬಹುತೇಕ ಖಚಿತವಾಗಿದೆ.
ಆಟೋ ಚಾಲಕನ ಪತ್ನಿಯಾಗಿರುವ ಲತಾ ಗಣೇಶ್ ಅವರ ಪಾಲಿಗೆ ಶಿವಮೊಗ್ಗ ನಗರಪಾಲಿಕೆಯ ಮೇಯರ್ ಗಿರಿ ಒಲಿದು ಬಂದಿದೆ.
ಲತಾ ಗಣೇಶ, ಗಾಡಿಕೊಪ್ಪ 6ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕೊನೆ ಗಳಿಗೆಯಲ್ಲಿ ಟಿಕೆಟ್ ದಕ್ಕಿಸಿಕೊಂಡು ಸ್ಪರ್ಧೆಗೆ ಇಳಿದಿದ್ದರು. ಪರಿಶಿಷ್ಠ ಜಾತಿ ಮಹಿಳಾ ಕ್ಷೇತ್ರವಾದ ಇಲ್ಲಿ ಗೆಲವನ್ನೂ ದಾಖಲಿಸಿದ್ದರು. ಇದಲ ಬೆನ್ನಲ್ಲೇ ಸರ್ಕಾರ ಶಿವಮೊಗ್ಗ ನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರಿಸಿ ಆದೇಶ ಹೊರಡಿಸಿದ್ದು, ಬಿಜೆಪಿಯಲ್ಲಿ ಈ ಸ್ಥಾನಕ್ಕೆ ಅರ್ಹರಾಗಿರುವವರು ಇವರೊಬ್ಬರೇ ಆಗಿದ್ದಾರೆ. ಹೀಗಾಗಿ ನಗರ ಪಾಲಿಕೆ ಸದಸ್ಯರಾಗಿ ಗೆದ್ದ ಬೆನ್ನಲ್ಲೇ ಪಾಲಿಕೆಯ ಮೇಯರ್ ಸ್ಥಾನ ಅವರನ್ನು ಹುಡುಕಿಕೊಂಡು ಬಂದಿದೆ.
ಲತಾ ಅವರ ಪತಿ ಗಣೇಶ್ ಅವರು ಸಾಮಾನ್ಯ ಆಟೋ ಚಾಲಕರಾಗಿದ್ದು, ನಿತ್ಯದ ಬದುಕಿಗೆ ಆಟೋ ಇವರ ಪಾಲಿಗೆ ದುಡಿಮೆಯ ಆಧಾರ. ಮೂರು ಜನ ಹೆಣ್ಣು ಮಕ್ಕಳು, ಒಪ್ಪ ಪುತ್ರ ಇವರ ಕುಟುಂಬ. ಪುತ್ರ ಇದೀಗ ಹುಬ್ಬಳ್ಳಿಯಲ್ಲಿ ಆಟೋ ಚಾಲಕನಾಗಿದ್ದಾರೆ. ಗಾಡಿಕೊಪ್ಪದ ಮೊದಲ ಕ್ರಾಸ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಇವರ ವಾಸವಿದೆ.
ಲತಾ ಗಣೇಶ್ ಅವರಿಗೆ ರಾಜಕೀಯ ಹೊಸದೇನಲ್ಲ. ಲತಾ ಅವರ ಸಹೋದರ ಆರ್.ಲಕ್ಷಣ್ ಬಿಜೆಪಿಯಲ್ಲಿ ಸಕ್ರಿಯ ಮುಖಂಡರಾಗಿದ್ದಾರೆ. ಈ ಹಿಂದೆ ಹೊಸಮನೆ ಬಡಾವಣೆಯಿಂದ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಇವರ ನೆರಳಿನಲ್ಲಿ ರಾಜಕಾರಣ ಆರಂಭಿಸಿದ್ದ ಲತಾ ಗಣೇಶ್, ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರ್ತಿಸಿಕೊಂಡಿದ್ದರು. ಗಾಡಿಕೊಪ್ಪದಲ್ಲಿ ಬಿಜೆಪಿಯನ್ನು ಸಂಘಟಿಸುತ್ತಾ ಗಾಡಿಕೊಪ್ಪ ವಾರ್ಡ್'ನ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದರು.