ಬೆಂಗಳೂರು: ರಾಜ್ಯ ಸರ್ಕಾರ ದೆಹಲಿ ಮಾದರಿ ಶಾಲಾ ನೀತಿ ಅಳವಡಿಸಿಕೊಳ್ಳಲು ನಿರ್ಧರಿಸಿದೆ.ಮಕ್ಕಳನ್ನು ಶಾಲೆಗೆ ನೋಂದಾಯಿಸಿಕೊಳ್ಳುವುದನ್ನು ಅಭಿವೃದ್ಧಿ ಪಡಿಸುವುದು ಹಾಗೂ ಪಠ್ಯಕ್ರಮ ಸುಧಾರಿಸುವುದು ಪ್ರಮುಖ ಉದ್ದೇಶವಾಗಿದೆ.
ದಸರಾ ಹಬ್ಬದ ನಂತರ ಹಿರಿಯ ಅಧಿಕಾರಿಗಳೊಂದಿಗೆ ದೆಹಲಗೆ ತೆರಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಹೇಳಿದ್ದಾರೆ, ದೆಹಲಿ ಸರ್ಕಾರಿ ಶಾಲೆಗಳ ಬಗ್ಗೆ ಅಧ್ಯಯನ ಮಾಡುವಂತೆ ಸಿಎಂ ಕುಮಾರ ಸ್ವಾಮಿ ಕೂಡ ಹೇಳಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ನಿರ್ಧರಿಸಿದ್ದು, ಖಾಸಗಿ ಶಾಲೆಗಳ ಮಟ್ಟಕ್ಕೆ ಸರ್ಕಾರಿ ಶಾಲೆಗಳ ಗುಣಮಟ್ಟ ತರುವುದು ನಮ್ಮ ಉದ್ದೇಶವಾಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸುವುದರ ಜೊತೆಗೆ ಮಕ್ಕಳ ಸಂಖ್ಯೆ ಹೆಚ್ಚಿಸುವುದು ಕೂಡ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಿಎಂ ಕುಮಾರ ಸ್ವಾಮಿ ದೆಹಲಿಗೆ ಭೇಟಿ ನೀಡಿದ್ದ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ದೆಹಲಿ ಸರ್ಕಾರಿ ಶಾಲೆಗಳ ಮಾದರಿಯನ್ನು ನಮ್ಮಲ್ಲೂ ಜಾರಿಗೆ ತರುವ ಅವಶ್ಯಕತೆಯಿದ್ದು, ಅಗತ್ಯವಿರುವ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಜೊತೆಗೆ ದೆಹಲಿ ಮಾದರಿಯಲ್ಲಿ ರಾಜ್ಯದ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಅಗತ್ಯವಾದ ಹಣಕಾಸು ನೆರವು ನೀಡುವ ಭರವಸೆ ನೀಡಿದ್ದರು. ದೆಹಲಿ ಸರ್ಕಾರ ಪ್ರತಿ ವರ್ಷ ಸರ್ಕಾರಿ ಶಾಲೆಗಳಿಗೆ ಸುಮಾರು 3ಸಾವಿರ ಕೋಟಿ ರು ಹಣ ವ್ಯಯಿಸುತ್ತದೆ, ಇದನ್ನು ನಾವು ಸಿಎಂ ಅವರಿಗೆ ಸಭೆಯಲ್ಲಿ ತಿಳಿಸಿದಾಗ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹಣ ವೆಚ್ಚ ಮಾಡಲು ಸರ್ಕಾರ ಸಿದ್ಧವಿರುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಆಯ್ದ ಶಾಲೆಗಳನ್ನು ಶಿಕ್ಷಕರನ್ನು ಆಯ್ಕೆ ಮಾಡಿ ತರಬೇತಿಗಾಗಿ ಅವರನ್ನು ಸಿಂಗಾಪೂರ್ ಗೆ ಕಳುಹಿಸಲಾಗುವುದು, 20 ಸರ್ಕಾರಿ ಶಾಲೆಗಳ 40 ಶಿಕ್ಷಕರನ್ನು ಪರಿಕ್ರಮ ಹ್ಯೂಮಾನಿಟಿ ಫೌಂಡೇಶನ್ ಅಡಿಯಲ್ಲಿ ಸಿಂಗಾ ಪೂರ್ ಗೆ ಕಳುಹಿಸಿ ಪರಿಣತರಿಂದ ತರಬೇತಿ ಕೊಡಿಸಲಾಗುವುದು, ಮುಖ್ಯವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ತರಬೇತಿ ನೀಡಲಾಗುವುದು, ಪರಿಕ್ರಮ ಫೌಂಡೇಷನ್ ಸಿಂಗಾಪೂರ್ ನ ಮತ್ತೊಂದು ಸಂಸ್ಥೆ ಜೊತೆ ಕೈ ಜೋಡಿಸಿದ್ದು ಅಗತ್ಯ ತರಬೇತಿ ನೀಡಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos