ರಾಜ್ಯ

ಕರ್ನಾಟಕ ಸರ್ಕಾರದ ವಶಕ್ಕೆ ಗೋಕರ್ಣ ದೇವಾಲಯ

Srinivas Rao BV
ಕಾರ್ವಾರ: ಹೈಕೋರ್ಟ್ ಆದೇಶದ ಅನುಸಾರ ಉತ್ತರ ಕನ್ನಡ ಜಿಲ್ಲಾಡಳಿತ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ವಶಕ್ಕೆ ಪಡೆದಿದೆ.  ಕಳೆದ 10 ವರ್ಷಗಳಿಂದ ದೇವಾಲಯ ಶ್ರೀರಾಮಚಂದ್ರಾಪುರ ಮಠದ ವಶದಲ್ಲಿತ್ತು. 
ಹಲವು ವರ್ಷಗಳ ಕಾಲ ದೇವಾಲಯವನ್ನು ಟ್ರಸ್ಟಿಗಳು ನಿರ್ವಹಣೆ ಮಾಡುತ್ತಿದ್ದರು. ಆದರೆ 2008 ರ ಆಗಸ್ಟ್ 12 ರಂದು ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸುವ ನಿರ್ಧಾರ ಕೈಗೊಂಡಿತ್ತು. ಅಂದಿನಿಂದ 10 ವರ್ಷಗಳ ಕಾಲ ದೇವಾಲಯ ರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟಿತ್ತು. 
ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ದೇವಾಲಯದ ಆಡಳಿತವನ್ನು ನೀಡಿರುವುದನ್ನು ಪ್ರಶ್ನಿಸಿ ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಧಾರ್ಮಿಕ ದತ್ತಿ ಇಲಾಖೆಗೆ ದೇವಾಲಯದ ಆಡಳಿತವನ್ನು ಹಸ್ತಾಂತರಿಸಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ದೇವಾಲಯದ ಆಡಳಿತಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂದೂ ಕೋರ್ಟ್ ಸೂಚನೆ ನೀಡಿತ್ತು. 
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಕೆಲವು ಗೊಂದಲಗಳಿದ್ದ ಕಾರಣ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೋರಿದ್ದರು.  ರಾಜ್ಯ  ಆಡಿಟರ್ ಜನರಲ್ ಅವರಿಂದ ಸ್ಪಷ್ಟನೆ ಪಡೆದ ಬಳಿಕ ಜಿಲ್ಲಾಧಿಕಾರಿಗಳಿಗೆ ಆಡಳಿತವನ್ನು ವಹಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 
SCROLL FOR NEXT