ರಾಜ್ಯ

ಒಂದೇ ತಿಂಗಳಲ್ಲಿ 5 ಅಪಘಾತ: ಆತಂಕದಲ್ಲಿ ಸರ್ಜಾಪುರ ನಿವಾಸಿಗಳು, ರಸ್ತೆ ಸರಿಪಡಿಸುವಂತೆ ಪಿಡಬ್ಲ್ಯೂಡಿಗೆ ಪತ್ರ

Manjula VN
ಬೆಂಗಳೂರು: ಸರ್ಜಾಪುರದ ಸೊಮ್ಪುರ ಮತ್ತು ಅತ್ತಿಬೆಲೆ ನಡುವಿನ ರಸ್ತೆಯನ್ನು ಅಗಲೀಕರಣ ನಡೆಸುವ ಕಾಮಗಾರಿ ನಡೆಸಲಾಗುತ್ತಿದ್ದು, ಇದರ ಪರಿಣಾಮ ಒಂದೇ ತಿಂಗಳಲ್ಲಿ 5 ಅಪಘಾತ ಸಂಭವಿಸಿರುವ ಹಿನ್ನೆಲಯಲ್ಲಿ ಸರ್ಜಾಪುರ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. 
ಕಳೆದ ವಾರ ಈ ರಸ್ತೆಯ ಬಳಿಯಿರುವ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಬಳಿ 2 ಅಪಘಾತಗಳು ಸಂಭವಿಸಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯರು ಇದೀಗ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದು, ರಸ್ತೆಗಳನ್ನು ಶೀಘ್ರಗತಿಯಲ್ಲಿ ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ರಸ್ತೆಗಳನ್ನು ಸರಿಪಡಿಸಲು ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. 
ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿರುವ ಶ್ರೀರಾಮ್ ಸ್ಮೃತಿ ಅಪಾರ್ಟ್'ಮೆಂಟ್ ಬಳಿ ಸೆ.15 ಮತ್ತು 16 ರಂದು ಎರಡು ಅಪಘಾತಗಳು ಸಂಭವಿಸಿತ್ತು. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದರು. 
ಅಪಘಾತದಲ್ಲಿ ಶುಭೊದೀಪ್ ಘೋಷ್ ಎಂಬುವವರಿಗೆ ಆಟೋ ಡಿಕ್ಕೆ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ತಮ್ಮ ವಾಹನ ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡ ಪರಿಣಾಮ ಅರ್ಚನಾ ರಘುರಾಮ್ ಎಂಬುವವರು ಆಯತಪ್ಪಿ ರಸ್ತೆಯಲ್ಲಿ ಬಿದ್ದಿದ್ದಾರೆ. 
ಇನ್ನು ಅಪಾರ್ಟ್'ಮೆಂಟ್ ನಿವಾಸಿಯಾಗಿರುವ ಅನಿಲ್ ಶ್ರೀನಿವಾಸ್ ಎಂಬುವವರು ಸಂಚಾರ ದಟ್ಟಣೆ, ರಸ್ತೆಗಳ ಕೆಟ್ಟ ಪರಿಸ್ಥಿತಿ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಇಲ್ಲಿನ ರಸ್ತೆಗಳಲ್ಲಿ ಎಲ್ಲಿಯೂ ಬ್ಯಾರಿಕೇಡ್ ಗಳಿಲ್ಲ. ರಸ್ತೆಯಲ್ಲಿ ಎರಡು ಮಾರ್ಗಗಳಷ್ಟೇ ಇದೆ. ಆ ಮಾರ್ಗ ಸಂಪೂರ್ಣ ಗುಂಡಿಮಯಗೊಂಡಿದೆ. ಕೆಲ ಗುಂಡಿಗಳನ್ನು ಈಗಷ್ಟೇ ಮುಚ್ಚಲಾಗಿದೆ. ಆದರೆ, ಮಳೆ ಬಂದ ಪರಿಣಾಮ ಆ ಗುಂಡಿಗಳು ಮತ್ತೆ ಬಾಯಿ ತೆರೆದಿವೆ ಎಂದು ಹೇಳಿದ್ದಾರೆ. 
ಮತ್ತೊಬ್ಬ ನಿವಾಸಿ ಶ್ರೀನಿವಾಸ್ ಎಂಬುವವರು ಮಾತನಾಡಿ, ರಸ್ತೆ ಅಗಲೀಕರಣ ನಡೆಯುತ್ತಿರುವ ಹಿನ್ನಲೆಯಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವಂತೆ ಈಗಾಗಲೇ ಅತ್ತಿಬೆಲೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದೇವೆ. ಪೊಲೀಸರು ಕ್ರಮ ಕೈಗೊಳ್ಳದೇ ಹೋದರೆ, ಮುಂದಿನ ವಾರದಲ್ಲಿ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದ್ದಾರೆ. 
SCROLL FOR NEXT