ರಾಜ್ಯ

ಬೆಂಗಳೂರು-ಮೈಸೂರು 6 ಪಥ ರಸ್ತೆ ಮತ್ತೆ ವಿಳಂಬ; ಅರಣ್ಯ ಇಲಾಖೆಯಿಂದ ಅಡ್ಡಿ

Sumana Upadhyaya

ಬೆಂಗಳೂರು: ಬೆಂಗಳೂರು-ಮೈಸೂರು ನಡುವೆ ಕೇವಲ 90 ನಿಮಿಷಗಳಲ್ಲಿ ತಲುಪುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ 6 ಪಥದ ರಸ್ತೆ ಕಾಮಗಾರಿ ಮತ್ತೆ ವಿಳಂಬವಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ದಿಲಿಪ್ ಬಿಲ್ಡ್ ಕಾನ್ ನಡುವೆ ಒಪ್ಪಂದವೇರ್ಪಟ್ಟು 5 ತಿಂಗಳುಗಳು ಕಳೆದಿದ್ದು, ಈಗಿರುವ ನಾಲ್ಕು ಪಥದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು 6 ಪಥದ ರಸ್ತೆಯನ್ನಾಗಿ ಮಾಡುವ ಕೇಂದ್ರ ಸರ್ಕಾರದ ಯೋಜನೆ ಇದಾಗಿದೆ. ನಾಲ್ಕು ಸರ್ವಿಸ್ ಪಥದ ಹೊರತಾಗಿ ಈ 6 ಪಥದ ರಸ್ತೆಯಿರುತ್ತದೆ.

ಆದರೆ ಯೋಜನೆ ಕಾಮಗಾರಿ ಪ್ರಗತಿ ಕಂಡುಬಂದಿಲ್ಲ. ರಸ್ತೆ ಅಗಲ ಹೆಚ್ಚಳಕ್ಕೆ ಅರಣ್ಯ ಇಲಾಖೆಯಿಂದ ಕಡ್ಡಾಯ ಅನುಮತಿ ಪ್ರಮಾಣಪತ್ರ ಸಿಕ್ಕಿಲ್ಲ. ಕೇಂದ್ರದ 4,915 ಕೋಟಿ ರೂಪಾಯಿಗಳ ಲಭ್ಯವಿರುವ ನಿಯಂತ್ರಿತ ರಸ್ತೆಯನ್ನು ವಾಹನಗಳು ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಕಾಮಗಾರಿ ವೇಗವಾಗಿ ಮುಗಿಯಲು 117 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಎರಡು ಪ್ಯಾಕೆಜ್ ಗಳಾಗಿ ವಿಭಜನೆಗೊಳಿಸಲಾಗಿದೆ. ಬೆಂಗಳೂರು-ನಿಡಘಟ್ಟ ವಿಭಾಗದಲ್ಲಿ 56 ಕಿಲೋ ಮೀಟರ್ ಮತ್ತು ನಿಡಘಟ್ಟ-ಮೈಸೂರು ವಿಭಾಗದಲ್ಲಿ 61 ಕಿಲೋ ಮೀಟರ್.

ಸರ್ಕಾರ ಕರೆದಿದ್ದ ಟೆಂಡರ್ ನಲ್ಲಿ ಭೋಪಾಲ್ ಮೂಲದ ಘಟಕಕ್ಕೆ ಎರಡೂ ಪ್ಯಾಕೆಜ್ ಗಳ ಕಾಮಗಾರಿ ಹೋಗಿದೆ. ಎರಡೂ ಯೋಜನೆಗಳಿಗೆ 725 ಹೆಕ್ಟೇರ್ ಭೂಮಿ ಬೇಕಾಗಿದೆ. ಸುಮಾರು 70 ಶೇಕಡಾದಷ್ಟು ಅಗತ್ಯ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಡೆದಿದೆ. ಯಾವುದೇ ಯೋಜನೆಯ ಆರಂಭಕ್ಕೆ ಶೇಕಡಾ 80ರಷ್ಟು ಭೂಮಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಅದಾಗಿಯೂ ಭೂಮಿ ಪಡೆಯುವುದು ಇಲ್ಲಿ ಮುಖ್ಯವಲ್ಲ. ರಾಮನಗರ ಮತ್ತು ಮಂಡ್ಯಗಳಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 30 ಹೆಕ್ಟೇರ್ ನಷ್ಟು ಜಮೀನು ಮೂಲಕ ರಸ್ತೆ ಹಾದುಹೋಗುತ್ತದೆ. ಇದು ಸೂಕ್ಷ್ಮ ವಲಯವಲ್ಲದಿದ್ದರೂ ಕೂಡ ಇಲ್ಲಿ ಜನರು ಗುಡಿಸಲುಗಳನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

6 ಪಥದ ರಸ್ತೆ ಕಾಮಗಾರಿಗೆ 30 ಹೆಕ್ಟೇರ್ ಭೂಮಿ ಬಳಸಿಕೊಳ್ಳಲು ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸಿರು ನಿಶಾನೆ ತೋರಿಸಿದರೆ ಮಾತ್ರ ಯೋಜನೆ ಮುಂದುವರಿಯಬಹುದು.ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಮಧ್ಯೆ ಹಲವು ಸಭೆಗಳು ನಡೆದಿವೆ ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

SCROLL FOR NEXT