ರಾಜ್ಯ

ಸಾಲದ ಶೂಲ: ಹಣ ವಾಪಸ್ ನೀಡದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದು ಮದುವೆಯಾದ ಭೂಪ!

Shilpa D
ಬೆಳಗಾವಿ: ಸಾಲ ಪಡೆದ ಹಣವನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತುಕೊಂಡು ಹೋಗಿ ಮದುವೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬಸವರಾಜ್ ಎಂಬುವರ ಪತ್ನಿಯನ್ನು ಸ್ನೇಹಿತ ರಮೇಶ್ ಹೊತ್ತುಕೊಂಡು ಹೋಗಿ ಮದುವೆಯಾಗಿದ್ದಾನೆ.
ಬೆಳಗಾವಿಯ ರೆಸ್ಟೋರೆಂಟ್ ಒಂದರಲ್ಲಿ ಈ ಇಬ್ಬರು ಕೆಲಸ ಮಾಡುತ್ತಿದ್ದರು, ನಂತರ ಇಬ್ಬರು ಆಪ್ತ ಸ್ನೇಹಿತರಾದರು, ಪರಸ್ಪರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದರು. ಬಸವರಾಜ್  ರಮೇಶ್ ಬಳಿ 500ರು ಹಣವನ್ನು ಸಾಲವಾಗಿ ಪಡೆದಿದ್ದ., ಎಷ್ಟು ದಿನವಾದ್ರೂ ಹಣವನ್ನು ಬಸವರಾಜ್ ವಾಪಸ್ ನೀಡಿರಲಿಲ್ಲ.  ತುಂಬಾ ಸಮಯ ಕಳೆದರು ಸಾಲ ವಾಪಸ್ ಕೊಡಲಿಲ್ಲ ಎಂದು ಬಸವರಾಜ್ ಪತ್ನಿಯನ್ನು ಕರೆದೊಕೊಂಡು ಹೋಗಿ ರಮೇಶ್ ಮದುವೆಯಾಗಿದ್ದಾನೆ.
ಬಸವರಾಜ್ ಗೆ 3 ವರ್ಷದ ಮಗಳಿದ್ದು, ಪತ್ನಿಗಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಮರಮೇಶ್ ಈಗಾಗಲೇ ಮದುವೆಯಾಗಿದ್ದು, ಪತ್ನಿಯನ್ನು ತವರು ಮನೆಗೆ ಕಳುಹಿಸಿ ಇದೀಗ ಬಸವರಾಜ್ ಪತ್ನಿ ಜತೆಗೆ ವಾಸಿಸುತ್ತಿದ್ದಾನೆ. ಬಸವರಾಜ್ ಪತ್ನಿ ಕೂಡ ಇದೇ ರೆಸ್ಟೊರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು,
ನನ್ನ ಪತ್ನಿಯನ್ನು ವಾಪಸ್ ಕಳುಹಿಸುವಂತೆ ನಾನು ಅನೇಕ ಬಾರಿ ರಮೇಶ್ ಗೆ ಫೋನ್ ಮಾಡಿದ್ದೇನೆ. ಆದರೆ ರಮೇಶ್,  ನನ್ನ ಪತ್ನಿಯನ್ನು ಕಳುಹಿಸುತ್ತಿಲ್ಲ, ಬದಲಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಬಸವರಾಜ್ ದೂರಿದ್ದಾನೆ. ತನ್ನ ಬಳಿ ವಾಪಸ್ ಬರುವಂತೆ ಪತ್ನಿಗೆ ಕೇಳಿದೆ, ಆದರೆ ರಮೇಶ್ ಆಕೆಯ ಬ್ರೈನ್ ವಾಶ್ ಮಾಡಿದ್ದಾನೆ ಎಂದು ಬಸವರಾಜ್ ಆರೋಪಿಸಿದ್ದಾನೆ.
ಕೇವಲ 500 ರೂಪಾಯಿಗಾಗಿ ಸ್ನೇಹಿತನ ಪತ್ನಿಯನ್ನು ಹೊತ್ತೊಯ್ದು ಮದುವೆಯಾಗಿರುವ ರಮೇಶ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ, ಹೀಗಾಗಿ ಬಸವರಾಜ್ ಡಿಸಿಪಿ ಕಚೇರಿ ಮುಂದೆ ತನಗೆ ನ್ಯಾಯ ಕೊಡಿಸುಕೊಡುವಂತೆ ಧರಣಿ ಕೂತಿದ್ದಾನೆ.
ಪತ್ನಿಯನ್ನು ವಾಪಸ್ ಪಡೆಯಲು ನೊಂದ ಪತಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದು, ಪೊಲೀಸರು ನೊಂದ ಪತಿಗೆ ನ್ಯಾಯ ಕೊಡಿಸಬೇಕಿದೆ.
SCROLL FOR NEXT