ಬೆಂಗಳೂರು: ಇನ್ನು ಮುಂದೆ ಕಂದಾಯ ನಿವೇಶನವನ್ನು ಕಂದಾಯರಹಿತ ನಿವೇಶನವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಸುದೀರ್ಘ ದಿನಗಳವರೆಗೆ ಕಾಯಬೇಕಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪರಹಿತ ಪ್ರಮಾಣಪತ್ರವನ್ನು(ಎನ್ಒಸಿ) ಆನ್ ಲೈನ್ ಮೂಲಕ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ.
ಬೆಂಗಳೂರು ಸುತ್ತಮುತ್ತ ಇರುವ ಕೃಷಿ ಭೂಮಿಯನ್ನು ನಿವಾಸ, ವಾಣಿಜ್ಯ ಅಥವಾ ಕೈಗಾರಿಕಾ ಚಟುವಟಿಕೆಗಳಿಗೆ ಬಳಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಎನ್ಒಸಿಯನ್ನು ಪಡೆದಿರಬೇಕು. ಕಂದಾಯ ಜಮೀನುಗಳಿಗೆ ಎನ್ಒಸಿ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಲು 30 ದಿನಗಳ ಗಡುವು ನೀಡಲಾಗಿದೆ. ಭೂ ಪರಿವರ್ತನೆಗೆ 6 ತಿಂಗಳಿನಿಂದ ಒಂದು ವರ್ಷದವರೆಗೆ ಕಾಯುವ ಪರಿಸ್ಥಿತಿ ಇನ್ನು ಮುಂದೆ ಇರುವುದಿಲ್ಲ. ನಾಗರಿಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಈ ಸೌಲಭ್ಯವನ್ನು ನೀಡಿದೆ ಎಂದು ಬಿಡಿಎ ಉನ್ನತ ಮೂಲಗಳು ತಿಳಿಸಿವೆ.
ಆನ್ ಲೈನ್ ನಲ್ಲಿ ಭೂ ಪರಿವರ್ತನೆಗೆ ಅರ್ಜಿದಾರರು http://landrecords.karnataka.gov.in ಪೋರ್ಟಲ್ ಗೆ ಭೇಟಿ ಕೊಟ್ಟು ಭೂಮಿ ಹೊಂದಿರುವ ತಾಲ್ಲೂಕು ಅಥವಾ ಜಿಲ್ಲೆಯಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಅಥವಾ ತಹಶೀಲ್ದಾರ್ ಗೆ ಅರ್ಜಿ ಸಲ್ಲಿಸಬೇಕು.
ಅರ್ಜಿಯಲ್ಲಿ ಭೂಮಿಯ ವಿವರಗಳನ್ನು ನೀಡಿ ಮತ್ತು ಭೂಪರಿವರ್ತನೆಯ ವಿವರಗಳನ್ನು ನೀಡಿ ಅಫಿಡವಿಟ್ಟು ಸಲ್ಲಿಸಿ ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಸಲ್ಲಿಸಬೇಕು. ಆಗ ಒಂದು ಐಡಿ ನಂಬರ್ ಸಿದ್ದವಾಗುತ್ತದೆ, ಆ ಐಡಿ ನಂಬರ್ ಮೂಲಕ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಕಾಲಕಾಲಕ್ಕೆ ಆನ್ ಲೈನ್ ನಲ್ಲಿ ನೋಡುತ್ತಿರಬಹುದು ಎನ್ನುತ್ತಾರೆ ಅಧಿಕಾರಿಗಳು.