ಬೆಂಗಳೂರು: ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ನಿರ್ಬಂಧಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ವನ್ಯಜೀವಿ ತಜ್ಞರಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಎರಡೂ ರಾಜ್ಯಗಳ ಮಧ್ಯೆ ಈ ವಿಷಯದಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ರಾಹುಲ್ ಗಾಂಧಿಯವರಿಗೆ ಮಾಹಿತಿಯಿಲ್ಲ. ಎಂದು ತಜ್ಞರು ಹೇಳುತ್ತಾರೆ. ಕಳೆದ ಬುಧವಾರ ವಯನಾಡಿನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಬಂಡೀಪುರ ಹುಲಿ ಅಭಯಾರಣ್ಯದಲ್ಲಿನ ರಾತ್ರಿ ಸಂಚಾರ ನಿರ್ಬಂಧ ಸಮಸ್ಯೆ ಕುರಿತು ಗಮನಹರಿಸಲಾಗುವುದು ಎಂದು ಹೇಳಿದ್ದರು.
ಬಂಡೀಪುರ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಕಳೆದ 8 ವರ್ಷಗಳಿಂದ ನಿರ್ಬಂಧವಿದೆ. ಕರ್ನಾಟಕ ಸರ್ಕಾರ ಇದಕ್ಕೆ ಬದಲಿ ಮಾರ್ಗವನ್ನು ನೀಡಿದ್ದು ಅದು ಹಗಲು ಮತ್ತು ರಾತ್ರಿಯಿಡೀ ತೆರೆದಿರುತ್ತದೆ.
ವೈಲ್ಡ್ ಲೈಫ್ ಫಸ್ಟ್ ನ ಟ್ರಸ್ಟಿ ಪ್ರವೀಣ್ ಭಾರ್ಗವ್, ರಾತ್ರಿ ವೇಳೆ ಸಂಚಾರ ನಿರ್ಬಂಧ ವಿವಾದ ಸುಪ್ರೀಂ ಕೋರ್ಟ್ ಮುಂದಿದೆ ಎಂದು ರಾಹುಲ್ ಗಾಂಧಿಯವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ವನ್ಯಜೀವಿ ಸಂರಕ್ಷಣೆ ದೃಷ್ಟಿಯಿಂದ ನಾವು ಅವರನ್ನು ಈ ವಿಚಾರದಲ್ಲಿ ಮುಂದುವರಿಯದಂತೆ ಒತ್ತಾಯಿಸಬೇಕಾಗಿದೆ. 2008ರಲ್ಲಿ ರಾಹುಲ್ ಗಾಂಧಿಯವರು ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳಿಗೆ ಭೇಟಿ ಕೊಟ್ಟು ಅವುಗಳ ಸಂರಕ್ಷಣೆಗಾಗಿ ತಮ್ಮ ಬೆಂಬಲ ಸೂಚಿಸಿದ್ದರು ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos