ಬೆಂಗಳೂರು: ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಸಾವಿಗೀಡಾಗಿದ್ದ ಐವರು ಕನ್ನಡಿಗರ ಮೃತದೇಹ ನಿನ್ನೆ ತಡರಾತ್ರಿ ಬೆಂಗಳೂರು ತಲುಪಿದೆ. ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೃತ ಜೆಡಿಎಸ್ ಮುಖಂಡರಾದ ಕೆ.ಜಿ. ಹನುಮಂತರಾಯಪ್ಪ, ಎಂ. ರಂಗಪ್ಪ ಅವರ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದ್ದಾರೆ.
ಬಾಂಬ್ ದಾಳಿಯಲ್ಲಿ ಮಡಿದ ರಾಜ್ಯದ ಮೃತರ ದರ್ಶನ ಪಡೆದ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾದಲ್ಲಿ ಮಡಿದವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಲ್ಲಿಗೆ ಆಗಮಿಸಿದ ದೇವೇಗೌಡರು ""ಭಯೋತ್ಪಾದನೆ ಜಾಗತಿಕ ಪಿಡುಗು, ಇದರಿಂದ ಆತಂಕ ಹೆಚ್ಚುತ್ತಿದೆ.ಇದನ್ನು ಬುಡಸಮೇತ ತೊಲಗಿಸುವವರೆಗೆ ಶಾಂತಿ ನೆಲೆಸುವುದಿಲ್ಲ. ಉಗ್ರ ಚಟುವಟಿಕೆ ನಿರ್ನಾಮ ಮಾಡಲು ಎಲ್ಲರೂ ಒಟ್ತಾಗಿ ಕೈಜೋಡಿಸಬೇಕು" ಎಂದು ಹೇಳಿದ್ದಾರೆ.