ರಾಜ್ಯ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ನಾಲ್ವರ ಸಾವು 

Nagaraja AB

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಹೀಂದ್ರಾ ಕ್ಸೈಲೊ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹಂದ್ರಹಳ್ಳಿ ಬಳಿ ನಡೆದಿದೆ.

ಮೃತರನ್ನು ಬಾಗೇಪಲ್ಲಿ ತಾಲೂಕಿನ ಆವಲಹಳ್ಳಿಯ ನಕಲಪಲ್ಲಿ  ಗ್ರಾಮದ ಮಂಜುನಾಥ್ (26), ರಮೇಶ್ (30), ಅಶೋಕ್ ರೆಡ್ಡಿ (26), ಗೌರಿಶ್ (23) ಎಂದು ಗುರ್ತಿಸಲಾಗಿದೆ. 

ಆವಲಹಳ್ಳಿಯಿಂದ ನಂದಿಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಮುಂಜಾನೆ  2.30ಕ್ಕೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐವರಿಗೆ ಗಂಭೀರ ಗಾಯವಾಗಿದ್ದು, ಹೊಸಕೋಟೆ ಆಸ್ಪತ್ರೆಗೆ  ದಾಖಲಿಸಲಾಗಿದೆ.

ಶುಕ್ರವಾರ ಮಧ್ಯರಾತ್ರಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಿದ್ದಾರೆ. ಶನಿವಾರ, ಭಾನುವಾರ ರಜೆಯಿದ್ದ ಕಾರಣ ಒಂಬತ್ತು ಜನ ಕಾರಿನಲ್ಲಿ ನಂದಿಬೆಟ್ಟಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ದೇವನಹಳ್ಳಿ ಖಾಸಗಿ ಆಸ್ಪತ್ರೆ ರವಾನಿಸಲಾಗಿದೆ.

SCROLL FOR NEXT