ರಾಜ್ಯ

ಬೆಂಗಳೂರು: ಪಬ್ ಉದ್ಯೋಗಿ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ಕೊಂದ ದುಷ್ಕರ್ಮಿಗಳು

Lingaraj Badiger

ಬೆಂಗಳೂರು: ವ್ಯಕ್ತಿವೋರ್ವನ ಮೇಲೆ ದುಷ್ಕರ್ಮಿಗಳು ಬಾಟಲಿಯಿಂದ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

33 ವರ್ಷದ ಸುನೀಲ್ ಕುಮಾರ್ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಜೆಪಿ ನಗರದ ಎರಡನೇ ಹಂತದಲ್ಲಿರುವ ಪಂಪ್ ಹೌಸ್ ಪಬ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಶನಿವಾರ ತಡರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ದಾರಿಯಲ್ಲಿ ಅಪರಿಚಿತ ದುಷ್ಕರ್ಮಿಗಳಿಬ್ಬರು ಆತನನ್ನು ಅಡ್ಡಗಟ್ಟಿ ಬಾಟಲಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಸುನೀಲ್ ಕುಮಾರ್ ಬಲಗಾಲಿನ 4 ಜಾಗದಲ್ಲಿ ಹಲವಾರು ಬಾರಿ ಹರಿತವಾದ ಬಾಟಲಿ ಗಾಜಿನಿಂದ ಚುಚ್ಚಲಾಗಿದ್ದು, ಇದರಿಂದ ಆತ ತೀವ್ರ ರಕ್ತಸ್ರಾವವಾಗಿ ನಿತ್ರಾಣಗೊಂಡಾಗ ಕೊಲೆಗಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ಬಳಿಕ ಸುನಿಲ್ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಘಟನೆ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT