ರಾಜ್ಯ

ರಾಮನಗರ: ರಕ್ಕಸ ಬೀದಿ ನಾಯಿಗಳ ದಾಳಿಯಿಂದ 9 ಜನರಿಗೆ ಗಾಯ

Nagaraja AB

ರಾಮನಗರ: ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ರಕ್ಕಸ ಬೀದಿ ನಾಯಿಗಳ ದಾಳಿಯಿಂದಾಗಿ ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಗುಡೇಮಾರನಹಳ್ಳಿ ಸರ್ಕಲ್ ಹಾಗೂ ಮಾಗಡಿಯ ನಂಜಪ್ಪ ಸರ್ಕಲ್ ನಲ್ಲಿ  ಬೀದಿನಾಯಿಗಳು ಜನರನ್ನು ಕಚ್ಚಿವೆ. ಇದರಿಂದಾ ಆಕ್ರೋಶಗೊಂಡ ಜನರು ಅವರನ್ನು ಬೆನ್ನಟ್ಟಿ ಕೊಂದು ಹಾಕಿದ್ದಾರೆ.

ನಾಯಿಗಳ ದಾಳಿಯಿಂದ ಗಾಯಗೊಂಡಿರುವ ಐದು ವರ್ಷದ ನಂದಕಿಶೋರ್ ಎಂಬ ಬಾಲಕನ ಪರಿಸ್ಥಿತಿ ಗಂಭೀರವಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಸರ್ಕಾರಿ ಕಾಲೇಜ್ ಆವರಣದಲ್ಲಿ 16 ವರ್ಷದ ಭೂಮಿಕಾ ಎಂಬ ಮತ್ತೊಬ್ಬ ಯುವತಿ ಮೇಲೆ  ನಾಯಿಗಳು  ದಾಳಿ ನಡೆಸಿವೆ. ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂಬುದು ತಿಳಿದುಬಂದಿದೆ. 

ಪದೇ ಪದೇ ಬೀದಿ ನಾಯಿಗಳು ದಾಳಿ ಮಾಡುತ್ತಿರುವುದನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರು. ಕೆಲವರು ಬೀದಿನಾಯಿಗಳನ್ನು ಅಟ್ಟಾಡಿಸುವ ಮೂಲಕ ಹತ್ಯೆ ಮಾಡಿದ್ದಾರೆ. 

ಮಾಗಡಿಯಲ್ಲಿ ಇಂತಹ ದಾಳಿಗಳು ನಡೆಯುತ್ತಲೇ ಇವೆ. ಆದರೆ, ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತೀಚಿಗೆ ಅಪ್ರಾಪ್ತ ಬಾಲಕಿ ನಾಯಿ ದಾಳಿಯಿಂದ ಮೃತಪಟ್ಟಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದಾಗ್ಯೂ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಗಾಯಾಳು 14 ವರ್ಷದ ನಂಜಪ್ಪ ಹೇಳಿದ್ದಾರೆ

SCROLL FOR NEXT