ಶಿವಮೊಗ್ಗ: ಮಲೆನಾಡ ಸೆರಗು ಶಿವಮೊಗ್ಗದ ಜಿಲ್ಲೆಯಲ್ಲಿ ಮಂಗಗಳ ಹಾವಳಿ ಮೀತಿ ಮೀರಿದ್ದು, ಇವುಗಳಿಂದ ಕಾಫಿ ಮತ್ತು ಅಡಿಕೆ ಬೆಳೆಯನ್ನು ರಕ್ಷಿಸಲು ರೈತರೊಬ್ಬರು ಸಖತ್ ಐಡಿಯಾ ಮಾಡಿದ್ದಾರೆ.
ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಲ್ಲೂರು ಗ್ರಾಮದ ರೈತ ಶ್ರೀಕಾಂತ್ ಗೌಡ, ನಾಯಿಗೆ ಹುಲಿಯಂತೆ ಕಾಣುವಂತೆ ಮೇಕಪ್ ಮಾಡಿದ್ದಾರೆ. ಇದನ್ನು ನೋಡಿ ಭಯಭೀತಿಗೊಂಡ ಕೋತಿಗಳು ಕಾಫಿ ಹಾಗೂ ಅಡಿಕೆ ತೋಟದತ್ತ ಬರುವುದನ್ನೆ ನಿಲ್ಲಿಸಿವೆ.
ಹುಲಿ ರೀತಿಯ ಆಟಿಕೆ ತಂದು ತೋಟದಲ್ಲಿ ಇಟ್ಟಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ನಂತರ ತಾವೇ ಸಾಕಿರುವ ನಾಯಿಗೆ ಹುಲಿ ರೀತಿ ಕಾಣುವಂತೆ ಬಣ್ಣ ಬಳಿಯಲು ನಿರ್ಧರಿಸಿದ್ದಾಗಿ ಅವರು ಹೇಳುತ್ತಾರೆ.
ಮಂಗಗಳ ಭೀತಿಯಿಂದ ಗೋವಾ ಮತ್ತಿತರ ಕಡೆಗಳಿಂದ ಹುಲಿ ರೀತಿಯ ಆಟಿಕೆಗಳನ್ನು ಇಟ್ಟಿದೆ. ಆದರೆ, ಕಾಲ ಕ್ರಮೇಣ ಅವುಗಳ ಬಣ್ಣ ಅಳಿಸಿದಂತೆ ಕೋತಿಗಳ ಕಾಟ ಜಾಸ್ತಿಯಾಯಿತು. ನಂತರ ನಾನೇ ಸಾಕಿದ್ದ ಬುಲ್ ಬುಲ್ ನಾಯಿಗೆ ಹುಲಿ ರೀತಿಯಲ್ಲಿ ಕಾಣುವಂತೆ ಬಣ್ಣ ಬಳಿದಿದ್ದಾಗಿ ಸುದ್ದಿಸಂಸ್ಥೆಯೊಂದಕ್ಕೆ ಅವರು ತಿಳಿಸಿದ್ದಾರೆ.
ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಈ ಬುಲ್ ಬುಲ್ ನಾಯಿಯನ್ನು ತೋಟದತ್ತ ಕರೆದುಕೊಂಡು ಹೋಗುತ್ತೇನೆ. ಇದನ್ನು ನೋಡಿದ ಮಂಗಗಳು ಹುಲಿ ಬಂತೆಂದು ತಿಳಿದು ಬೆದರಿ ಓಡಿ ಹೋಗುತ್ತವೆ. ಕೋತಿಗಳ ಕಾಟ ಈಗ ತಪ್ಪಿದಂತಾಗಿದೆ ಎಂದು ಶ್ರೀಕಾಂತ್ ಗೌಡ ನಿಟ್ಟುಸಿರು ಬಿಡುತ್ತಾರೆ.
ತಮ್ಮ ತಂದೆಯ ಈ ತಂತ್ರಗಾರಿಕೆ ಯಶಸ್ವಿಯಾಗಿದ್ದು, ಇತರ ಗ್ರಾಮಗಳ ರೈತರು ಈ ಯೋಜನೆಯನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಶ್ರೀಕಾಂತ್ ಗೌಡರ ಪುತ್ರಿ ಅಮೂಲ್ಯ ಸಂತಸ ವ್ಯಕ್ತಪಡಿಸಿದ್ದಾರೆ.