ರಾಜ್ಯ

ಒಂದೇ ದಿನ 2 ಕಡೆ ಅಟ್ಯಾಕ್, ಸರ ಅಪಹರಿಸಿ ಪರಾರಿಯಾದ ಕಳ್ಳರು.!

Srinivas Rao BV

ಮಂಡ್ಯ: ಇತ್ತೀಚೆಗೆ ಮಂಡ್ಯಜಿಲ್ಲೆಯಲ್ಲೂ ಸರಗಳ್ಳರ ಹಾವಳಿ ಹೆಚ್ಚಾಗಿದ್ದು ಒಂದೇ ದಿನ ಇಂದು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿ ಸರಗಳ್ಳತನ ಮಾಡಿದ ಘಟನೆ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಹರಳಹಳ್ಳಿಯ ಬೆವನಕುಪ್ಪೆ ಗ್ರಾಮದ ಜ್ಯೋತಿ(34),ಮತ್ತು ಪಾಂಡವಪುರ ಪಟ್ಟಣದ ಹಾರೋಹಳ್ಳಿ ಬಡಾವಣೆಯ ನಿವಾಸಿ ರೇಣುಕಮ್ಮ ಎಂಬುವವರ ಮೇಲೆಯೇ ಸರಗಳ್ಳರು ದಾಳಿ ಮಾಡಿ ನಕಲಿ ಸರಗಳನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.ಪಾಂಡವಪುರ ತಾಲೂಕಿನ ಹರಳಹಳ್ಳಿಯ ಬೆವನಕುಪ್ಪೆ ಗ್ರಾಮದ ಜ್ಯೋತಿ ಅವರು ಇಂದು ಬೆಳಿಗ್ಗೆ ಜಮೀನಿನ ಕಡೆ ತೆರಳುತ್ತಿದ್ದಾಗ ಹಿಂಬದಿಯಿಂದ ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದುಕೊಂಡಿದ್ದಾರೆ,ಈ ವೇಳೆ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿ ಪರಾರಿಯಾಗಿದ್ದಾರೆ.

ರಸ್ತೆ ಬದಿಯ ಕಬ್ಬಿನ ಗದ್ದೆಯಲ್ಲಿ ಅರೆಪ್ರಜ್ಞಾ ವಸ್ಥೆಯಲ್ಲಿ ಜ್ಯೋತಿ ಬಿದ್ದಿರುವುದು ಪತ್ತೆಯಾಗಿದ್ದು, ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಈ ದುಷ್ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಜ್ಯೋತಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತೊಂದು ಪ್ರಕರಣದಲ್ಲಿ ದುಷ್ಕರ್ಮಿಯೋರ್ವ ಪಾಂಡವಪುರ ಪಟ್ಟಣದ ಹೊರವಲಯದ ಬಿಸಿಲು ಮಾರಮ್ಮ ದೇವಸ್ಥಾನ ಬಳಿ ಜಮೀನಿನ ಕಡೆಗೆ ತೆರಳುತ್ತಿದ್ದ ಪಾಂಡವಪುರ ಪಟ್ಟಣದ ಹಾರೋಹಳ್ಳಿ ಬಡಾವಣೆಯ ನಿವಾಸಿ ರೈತ ಮಹಿಳೆ ರೇಣುಕಮ್ಮ ಎಂಬುವವರ ಮೇಲೆ ಹಲ್ಲೆ ನಡೆಸಿ ಸರ ಕಸಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಜಮೀನಿನಲ್ಲಿ ಕೆಲಸ ಮಾಡಲು ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ರೇಣುಕಮ್ಮ ಅವರ ಸೀರೆಎಳೆದು ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಜೋರಾಗಿ ಕಿರುಚಾಡಿದಾಗ ಮಹಿಳೆ ಮುಖದ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದಾನೆ.

ಗಾಯಗೊಂಡ ಮಹಿಳೆಯನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

SCROLL FOR NEXT