ರಾಜ್ಯ

ಹಾಸನ: ಕಬ್ಬಿನ ಗದ್ದೆಯಲ್ಲಿ ದುಡಿಯುತ್ತಿದ್ದ 15 ಜೀತದಾಳುಗಳ ಬಂಧಮುಕ್ತಿ

Raghavendra Adiga

ಬೆಂಗಳೂರು: ಕಬ್ಬು ಬೆಳೆಯುವ ಜಮೀನಿನಲ್ಲಿ ಜೀತದಾಳಾಗಿ ದುಡಿಯುತ್ತಿದ್ದ  15 ಸದಸ್ಯರ ಮೂರು ಕುಟುಂಬಗಳನ್ನು ಜೀತದಿಂದ ಬಂಧಮುಕ್ತಗೊಳಿಸಿರುವ ಪ್ರಕರಣ ಹಾಸನ ಜಿಲ್ಲೆ ಹಿಳೆನರಸೀಪುರದ ಕಲ್ಲುಬ್ಯಾಡರಹಳ್ಳಿಯಲ್ಲಿ ವರದಿಯಾಗಿದೆ.  ರಕ್ಷಣಾ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಮತ್ತು ಹೊಳೆನರಸೀಪುರ  ಗ್ರಾಮೀಣ ಪೊಲೀಸರು ಶಾಂತಾ ಜೀವ ಜ್ಯೋತಿ ಎಂಬ ಎನ್‌ಜಿಒ ಸಹಕಾರದೊಡನೆ ನಡೆಸಿದ್ದಾರೆ. ಈ ಸಂಬಂಧ ಕಬ್ಬು ಕತ್ತರಿಸುವ ಘಟಕದ ಮೇಲ್ವಿಚಾರಕನ ಬಂಧನವಾಗಿದ್ದು ಕಾರ್ಮಿಕರ ಜೀತ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆ ಹಾಗೂ  ಐಪಿಸಿಯ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

“15 ಕಾರ್ಮಿಕರಲ್ಲಿ ಐವರು ಪುರುಷರು, ಮೂವರು ಮಹಿಳೆಯರು ಮತ್ತು ಏಳು ಮಕ್ಕಳು ಸೇರಿದ್ದಾರೆ. 0 ರಿಂದ 14 ವರ್ಷದೊಳಗಿನ ಮಕ್ಕಳನ್ನು ಸಹ ಘಟಕದಲ್ಲಿ ಕೆಲಸ ಮಾಡಲು ಬಲವಂತವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆ ಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶವಿರಲಿಲ್ಲ.  ಈ ಕುಟುಂಬಗಳು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸೇರಿದ್ದು ಅವರನ್ನು ನಾಲ್ಕು ವರ್ಷಗಳ ಕಾಲ ಜೀತದಾಳಾಗಿ ಇರಿಸಲಾಗಿತ್ತು"ಪೊಲೀಸರು ತಿಳಿಸಿದ್ದಾರೆ.

“ಅವರು ಮೊದಲು ಕೆಲಸಕ್ಕೆ ಬಂದಾಗ, ಪ್ರತಿ ಕುಟುಂಬಕ್ಕೆ 1,500 ರೂ ವೇತನ ನಿಗದಿಪಡಿಸಿದ್ದರು. ಆ ಕುಟುಂಬದ ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಆಗ ಅವರು ತುಸು ಹಣ ಸಂಪಾದನೆಗೂ ಕಷ್ಟ ಅನುಭವಿಸುತ್ತಿದ್ದರು. ಅವರಿಗೆ ನ್ಯಾಯಯುತ ವೇತನ ಮತ್ತು ಉತ್ತಮ ಜೀವನ ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ಭರವಸೆ ನೀಡಲಾಗಿತ್ತು.  ಕಬ್ಬು ಕೊಯ್ಲು ಮಾಡಲು ಮೇಲ್ವಿಚಾರಕರು ಕಾರ್ಮಿಕರನ್ನು ಚನ್ನರಾಯಪಟ್ಟಣ, ಹೊಳೆನರಸೀಪುರ , ಹೊಸಪೆಟೆ, ರಾಣೆಬೆನ್ನೂರು, ಹರಿಹರ, ಹಿರೇಕೆರೂರ್ ನಂತಹಾ  ಪ್ರದೇಶಗಳಲ್ಲಿನ ವಿವಿಧ ಕಬ್ಬಿನ ತೋಟಗಳಿಗೆ ಸಾಗಿಸುತ್ತಿದ್ದರು. ಪ್ರತಿ ಕುಟುಂಬಕ್ಕೆ 15 ದಿನಗಳಿಗೊಮ್ಮೆ 300-500 ರೂ. ಮಾತ್ರ ನೀಡಲಾಗುತ್ತಿತ್ತು ”ಎಂದು ಪೊಲೀಸರು ತಿಳಿಸಿದ್ದಾರೆ.

“ಕಾರ್ಮಿಕರಿಗೆ ಟಾರ್ಪಾಲಿನ್ ಹಾಳೆಗಳನ್ನು ಮಾತ್ರ ನೀಡಲಾಗುತ್ತಿತ್ತು, ಅದನ್ನು ಅವರು ಕೆಲಸ ಮಾಡುವಲ್ಲೆಲ್ಲಾ ವಾಸಿಸಲು ಡೇರೆ ನಿರ್ಮಿಸಿಕೊಳ್ಳಲು ಬಳಸಬೇಕಿತ್ತು.  ಅವರಿಗೆ ಶೌಚಾಲಯ, ವಿದ್ಯುತ್ ಮುಂತಾದ ಯಾವುದೇ ಸೌಲಭ್ಯಗಳನ್ನು ನೀಡಲಾಗಿಲ್ಲ. ಪುರುಷ ಕಾರ್ಮಿಕರನ್ನು ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಕೆಲಸ ಮಾಡುವಂತೆ ನೇಮಿಸಿದ್ದರೆ ಮಹಿಳಾ ಕಾರ್ಮಿಕರನ್ನು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕೆಲಸ ಮಾಡುವಂತೆ ಹೇಳಲಾಗಿತ್ತು. ಕಾರ್ಮಿಕರಿಗೆ ಪ್ರತಿದಿನ 30 ನಿಮಿಷಗಳ ಕಾಲ ಒಂದು ಊಟದ ವಿರಾಮವನ್ನಷ್ಟೇ ನೀಡಲಾಗುತ್ತಿತ್ತು.  ಅವರಿಗೆ ವಾರ ರಜೆ ನೀಡಲಾಗಿಲ್ಲ ”ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT