ರಾಜ್ಯ

ರಜೆಗೆ ಊರಿಗೆ ಬಂದಿದ್ದ ಯೋಧ ಆತ್ಮಹತ್ಯೆಗೆ ಶರಣು!

Srinivasamurthy VN

ಗದಗ: ರಜೆಗೆ ಊರಿಗೆ ಬಂದಿದ್ದ ಭಾರತೀಯ ಸೇನೆಯ ಯೋಧನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಾಂತೇಶ್ ಮೇಟಿ(25 ವರ್ಷ|) ಆತ್ಮಹತ್ಯೆಗೆ ಶರಣಾದ ಸೈನಿಕನಾಗಿದ್ದು, 2 ತಿಂಗಳು ರಜೆಗೆಂದು ಊರಿಗೆ ಬಂದಿದ್ದ ಮಹಾಂತೇಶ್ ಇನ್ನೊಂದು ವಾರದಲ್ಲಿ ಕರ್ತವ್ಯಕ್ಕೆ ವಾಪಾಸ್ ಹೋಗುವ ಮುನ್ನವೇ ನೇಣಿಗೆ ಶರಣಾಗಿದ್ದಾರೆ, ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆಳ್ಳೆರಿನಲ್ಲಿ ಈ ಘಟನೆ ನಡೆದಿದ್ದು, ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪೊಲೀಸ್ ಮೂಲಗಳ ಪ್ರಕಾರ ಮಾಹಾಂತೇಶ್ ಅವರು 2005ರಲ್ಲಿ ಭಾರತೀಯ ಸೇನೆಗೆ ಭರ್ತಿಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಿಕ್ಕಿಂನ 228 ಬೆಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಬಾರಿ ತಮ್ಮ ಮದುವೆ ಕಾರ್ಯಕ್ರಮದ ನಿಮಿತ್ತ ಎರಡು ತಿಂಗಳು ರಜೆ ಹಾಕಿಕೊಂಡು ಮಹಾಂತೇಶ್ ಊರಿಗೆ ಬಂದಿದ್ದರು. ಕಳೆದ 15 ದಿನಗಳ ಹಿಂದೆಯಷ್ಟೇ ಇವರ ಮದುವೆ ನಿಶ್ಚಿತಾರ್ಥ ಕೂಡಾ ಮಾಡಲಾಗಿತ್ತು. ಆದರೆ ಬುಧವಾರ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಏಕಾಏಕಿ ಜಮೀನಿನಲ್ಲಿ ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಇತ್ತ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

SCROLL FOR NEXT