ರಾಜ್ಯ

ಈ ಬಾರಿ ಕರ್ನಾಟಕದ 'ಅನುಭವ ಮಂಟಪ' ಸ್ಥಬ್ದ ಚಿತ್ರ ಗಣರಾಜ್ಯೋತ್ಸವದ ಕೇಂದ್ರ ಬಿಂದು

Lingaraj Badiger

ಬೆಂಗಳೂರು: ನವದೆಹಲಿಯಲ್ಲಿ ಜನವರಿ 26 ರಂದು ಜರುಗಲಿರುವ 2020ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕರ್ನಾಟಕದ ಅನುಭವ ಮಂಟಪ ಸ್ಥಬ್ಧ ಚಿತ್ರ ಈ ಬಾರಿ ಕುತೂಹಲದ ಕೇಂದ್ರ ಬಿಂದುವಾಗಿದೆ. 

ಈ ಸ್ಥಬ್ದ ಚಿತ್ರ ಎಲ್ಲರ ಮನೆಸೂರೆಗೊಳ್ಳಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಪೂರ್ಣಗೊಂಡ ಹಾಗೂ ಸ್ವತಂತ್ರ ಗಣರಾಜ್ಯವಾಗಿರುವ ಈ ಸಂದರ್ಭದಲ್ಲಿ ಅನುಭವ ಮಂಟಪ ಸ್ಥಬ್ಧ ಚಿತ್ರವು ವಿಶೇಷ ಮಹತ್ವ ಪಡೆದಿದೆ.

ನವದೆಹಲಿಯ ಗಣರಾಜ್ಯೋತ್ಸವ ಪ್ರದರ್ಶನಕ್ಕೆ ಕರ್ನಾಟಕ ಸ್ಥಬ್ಥಚಿತ್ರವು ಸತತ ಹನ್ನೊಂದನೇ ಬಾರಿಗೆ ಆಯ್ಕೆಗೊಂಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ  ಎಸ್.ಎನ್. ಸಿದ್ದರಾಮಪ್ಪ ಸಂತಸ ವ್ಯಕ್ತಪಡಿಸಿದರು. 

ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಅನುಭವ ಮಂಟಪ ಅಸ್ಥಿತ್ವಕ್ಕೆ ಬಂದಿತ್ತು. ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಮಾನವ ಸಮಾಜದ ಅಭಿವೃದ್ಧಿಗಾಗಿ ಆಧ್ಯಾತ್ಮಿಕ, ತತ್ವಶಾಸ್ತ್ರ ಆಧಾರದ ಮೇಲೆ ಬಸವೇಶ್ವರರು ಹಾಕಿಕೊಟ್ಟ ಸಮಾನತೆಯ ದೃಷ್ಟಿಕೋನ, ಸೋದರತೆ ಮತ್ತು ಸಹಭಾಗಿತ್ವದ ಹಾದಿ ಈಗಲೂ ಸ್ಮರಣೀಯ. ಸಮಾಜ ಸುಧಾರಕರಾಗಿ ಇಂದಿಗೆ ಒಂಭತ್ತು ಶತಮಾನದ ಹಿಂದೆಯೇ ಸಾಮಾಜಿಕ ದೃಷ್ಟಿಕೋನವುಳ್ಳ ಆ ಮಹಾನ್ ಮಾನವತಾವಾದಿಯ ಸಾಧನೆ ಅಪಾರವಾದದ್ದು. ಈ ಎಲ್ಲವನ್ನೂ   ಸ್ಥಬ್ದ ಚಿತ್ರದಲ್ಲಿ ಅಳವಡಿಸುವ ಪ್ರಯತ್ನ ಸಾಗಿದೆ.

SCROLL FOR NEXT