ಹಾಸನ: ವೃತ್ತಿಯಲ್ಲಿ ಆಕೆ ಪಟ್ಟಣದ ತ್ಯಾಜ್ಯ ಸಂಗ್ರಹಿಸುವ ಹಾಗೂ ಬೀದಿ ಸ್ವಚ್ಚಗೊಳಿಸುವ ಮಹಿಳಾ ಪೌರ ಕಾರ್ಮಿಕೆ, ಆದರೆ ತನ್ನ ಕಾಯಕ ಮಾಡುವಾಗ ಸಿಕ್ಕಿದ ಭಾರಿ ಮೌಲ್ಯದ ಚಿನ್ನದ ನಕ್ಲೇಸ್ ಅನ್ನು ಅದರ ಮಾಲೀಕರಿಗೆ ತಲುಪಿಸುವ ಮೂಲಕ ತನ್ನ ಪ್ರಾಮಾಣಿಕತೆಯನ್ನು ಪ್ರದರ್ಶಿಸಿ ಹಲವರ ಹೃದಯ ಗೆದ್ದಿದ್ದಾರೆ.
ಸೋಮವಾರ 44 ವರ್ಷದ ಭಾಗ್ಯಮ್ಮ ಎಂದಿನಂತೆ ಬೀದಿ ಸ್ಚಚ್ಚಗೊಳಿಸುವ ಕಾಯಕದಲ್ಲಿದ್ದಾಗ ಕೆಎಸ್ ಆರ್ ಟಿಸಿ ನಿಲ್ದಾಣದಲ್ಲಿ ಸಿಕ್ಕಿದ ಸುಮಾರು 3.9 ಲಕ್ಷರೂಪಾಯಿ ಮೌಲ್ಯದ ಚಿನ್ನದ ನಕ್ಲೇಸ್ ಅನ್ನು ಅದರ ಮೂಲ ವಾರಸುದಾರ ಮಹಿಳೆಗೆ ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಭಾಗ್ಯಮ್ಮ ಅವರ ಪ್ರಾಮಾಣಿಕತೆಗೆ ಪೊಲೀಸ್, ರಾಜ್ಯ ರಸ್ತೆ ಸಾರಿಗೆ ನಿಗಮ ಅಲ್ಲದೆ, ಪುರಸಭೆಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದು ಸೂಕ್ತ ಬಹುಮಾನ ಪ್ರಕಟಿಸಿದ್ದಾರೆ.
ಎಂದಿನಂತೆ ಸೋಮವಾರ ಬೆಳಿಗ್ಗೆ ತನ್ನ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾಗ ಕೆಎಸ್ಆರ್ ಟಿಸಿ ನಿಲ್ದಾಣದ ಬಳಿ 120 ಗ್ರಾಂ ಚಿನ್ನದ ನಕ್ಲೇಸ್ ಸಿಕ್ಕಿತು. ಈ ಆಭರಣ, ಬೇಲೂರಿನ ನಗೀನ ಭಾನು ಎಂಬುವರಿಗೆ ಸೇರಿದ್ದಾಗಿದ್ದು. ಚಿಕ್ಕಮಗಳೂರು ಮದುವೆಗೆ ತೆರಳುವ ವೇಳೆ ಅವರು ಈ ಆಭರಣ ಕಳೆದುಕೊಂಡಿದ್ದರು.
ಒಂದೊಮ್ಮೆ ಸಿಕ್ಕಿದ್ದ ಆಭರಣವನ್ನು ಭಾಗ್ಯಮ್ಮ ತಾವೇ ಉಳಿಸಿಕೊಂಡಿದ್ದರೆ, ಆಕೆಗೆ ಜೀವಮಾನದ ಲಾಟರಿ ಹೊಡೆದಂತಾಗಿರುತ್ತಿತ್ತು. ಇದನ್ನು ಮಾಡದ ಭಾಗ್ಯಮ್ಮ ಚಿನ್ನಾಭರಣವನ್ನು ಪ್ರಾಮಾಣಿಕವಾಗಿ ಕೆಎಸ್ಆರ್ ಟಿಸಿ ಡಿಪೋ ಮ್ಯಾನೇಜರ್ ತಂದೊಪ್ಪಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಮಹಿಳೆ ನಗೀನಾ ಭಾನು ಅವರಿಗೆ ಚಿನ್ನಾಭರಣವನ್ನು ಹಸ್ತಾಂತರಿಸಿದರು. ಕಳೆದುಕೊಂಡಿದ್ದ ನಕ್ಲೇಸ್ ಮತ್ತೆ ಸಿಕ್ಕಿದಕ್ಕೆ ಸಂತೋಷ ವ್ಯಕ್ತಪಡಿಸಿದ ನಗೀನಾ ಭಾನು, ಭಾಗ್ಯಮ್ಮ ಅವರನ್ನು ಪೊಲೀಸ್ ಠಾಣೆಯಲ್ಲಿ ಬಿಗಿದಪ್ಪಿ ಧನ್ಯವಾದ ಸಲ್ಲಿಸಿದರು.
ಭಾಗ್ಯಮ್ಮ ಅವರಿಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು 5,000 ರೂಪಾಯಿ ಬಹುಮಾನ ಪ್ರಕಟಿಸಿದರು.