ಬೆಂಗಳೂರು: ನಿನ್ನೆ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಸುರಿದ ಮಳೆರಾಯ ತಂಪೆರೆದಿದ್ದು, ಇಂದೂ ಸಹ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕರು, 'ವಾಯುಭಾರ ಕುಸಿತದಿಂದ ಅಕಾಲಿಕವಾಗಿ ಈ ಮಳೆ ಸುರಿಯುತ್ತಿದೆ. ಹೆಚ್ಚಿನ ಪ್ರಮಾಣದ ಹಾನಿಯಾಗುವಷ್ಟು ಈ ಮಳೆ ಪ್ರಬಲವಾಗಿರುವುದಿಲ್ಲ. ಇಂದು ಮಧ್ಯಾಹ್ನದ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಗುಡುಗು, ಮಿಂಚು ಸಹಿತ ಮಳೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಗಾಳಿಸಹಿತ ಮಳೆ ಇದಾಗಿದ್ದರೂ ಸಹ ಕೇವಲ ಮಧ್ಯಾಹ್ನದ ನಂತರವಷ್ಟೇ ಬರಲಿದೆ. ನಿನ್ನೆಯೇ ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಆತಂಕ ಪಡುವಷ್ಟು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿ ಮಳೆಯುಂಟಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಇನ್ನು ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಎರಡು ಕಡೆ ಮರದ ಕೊಂಬೆಗಳು ಮುರಿದುಬಿದ್ದಿವೆ. ನಿಮ್ಹಾನ್ಸ್ ಬಳಿ ರಸ್ತೆಗೆ ಬಿದ್ದ ಮರದ ಕೊಂಬೆಯನ್ನು ಕೂಡಲೇ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ರಾಜಾಜಿನಗರದ ಎಂ ಇ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಮರದ ಕೊಂಬೆ ರಸ್ತೆಗೆ ಬಿದ್ದಿತ್ತು, ಅದನ್ನೂ ಕೂಡಲೇ ತೆರವುಕೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.