ರಾಜ್ಯ

ಭ್ರಷ್ಟರಿಗೆ ಮೋದಿ ಅಂದ್ರೆ ಕಷ್ಟ 40 ವರ್ಷಗಳಲ್ಲಿ ಆಗದ ಕೆಲಸ 4.5 ವರ್ಷಗಳಲ್ಲಿ ಮಾಡಿದ್ದೇವೆ: ಮೋದಿ

Srinivas Rao BV
ಹುಬ್ಬಳ್ಳಿ: ರಾಜ್ಯದ ಸಮ್ಮಿಶ್ರ ಸರ್ಕಾರ ಯಾರ ಹಿಡಿತದಲ್ಲಿದೆ? ಸರ್ಕಾರದ ಉಸ್ತುವಾರಿ ಯಾರು ಎಂಬುದು ಬ್ರಹ್ಮನಿಗೇ ಗೊತ್ತು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ. 
ಫೆ.10 ರಂದು ಹುಬ್ಬಳ್ಳಿಯ ಕೆಎಲ್ಇ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಹಾಗೂ ಜೆಡಿಎಸ್ ನ್ನು ಟಾರ್ಗೆಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಸರ್ಕಾರ ಯಾರ ಹಿಡಿತದಲ್ಲಿದೆ? ಸರ್ಕಾರದ ಉಸ್ತುವಾರಿ ಯಾರು ಎಂಬುದು ಬ್ರಹ್ಮನಿಗೇ ಗೊತ್ತು ಇಂತಹದ್ದೇ ಗೊಂದಲದ ಸ್ಥಿತಿಯನ್ನು ದೇಶದ ಮೇಲೂ ಹೇರುವುದು ಮಹಾಘಟಬಂಧನದ ಉದ್ದೇಶವಾಗಿದೆ. ದೇಶಕ್ಕೆ ಮಜಬೂತಾದ ಸರ್ಕಾರ ಬೇಕೋ ಅಥವಾ ಮಜಬೂರಿ( ಅಸಹಾಯಕ) ಸರ್ಕಾರ ಬೇಕೋ ಎಂಬುದು ನಿಮ್ಮ ಒಂದೊಂದು ಮತವೂ ನಿರ್ಧರಿಸಲಿದೆ ಎಂದು ಮೋದಿ ಹೇಳಿದ್ದಾರೆ. 
ರಾಜ್ಯದಲ್ಲಿ ಮುಖ್ಯಮಂತ್ರಿಗಳು ರಾತ್ರಿಯೆಲ್ಲಾ ಅಳುತ್ತಾರೆ, ನಾಮ್ ಧಾರಿಗಳು ದೆಹಲಿಯಲ್ಲಿ ಅಳುತ್ತಾರೆ, ಆದರೆ ಇವರನ್ನೆಲ್ಲಾ ನೋಡಿ ದೇಶದ ಜನತೆ ನಗುತ್ತಿದ್ದಾರೆ ಎಂದು ಮೋದಿ ಸಿಎಂ ಹೆಚ್ ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ.  ಇದೇ ವೇಳೆ ತಮ್ಮ ಸರ್ಕಾರದ ಸಾಧನೆಗಳನ್ನೂ ಜನತೆಗೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟರಿಗೆ ಮೋದಿ ಅಂದರೆ ಕಷ್ಟವಾಗಿದೆ. 40 ವರ್ಷಗಳಲ್ಲಿ ಆಗದ ಕೆಲಸವನ್ನು 4.5 ವರ್ಷಗಳಲ್ಲಿ ಮಾಡಿದ್ದೇವೆ. ಕರ್ನಾಟಕದಲ್ಲಿ ಚುನಾವಣೆ ಎದುರಾದಾಗ ಬರೊಬ್ಬರಿ 43 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ವಿಪಕ್ಷಗಳು ಭರವಸೆ ನೀಡಿದ್ದವು. ಆದರೆ ಈ ವರೆಗೂ ಕೇವಲ 700 ಜನರ ಸಾಲ ಮನ್ನಾ ಆಗಿದೆಯಷ್ಟೇ. ದಶಕಗಳಿಂದ ಇವರು ರೈತರಿಗೆ ಸುಳ್ಳು ಭರವಸೆಗಳನ್ನೇ ನೀಡುತ್ತಾ ಬಂದಿದ್ದಾರೆ. ಇದನ್ನು ಬದಲಾವಣೆ ಮಾಡಬೇಕು. ಈ ಬದಲಾವಣೆಗಾಗಿಯೇ ನಮ್ಮ ಸರ್ಕಾರ 12 ಕೋಟಿ ರೈತರಿಗೆ ನೇರವಾಗಿ ಸಹಾಯವಾಗುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಪ್ರತಿ ವರ್ಷವೂ ರೈತರಿಗೆ ನೆರವು ಸಿಗಲಿದೆ ಎಂದು ಮೋದಿ ಹೇಳಿದ್ದಾರೆ. 
ಇದೇ ವೇಳೆ ಮಹಾಘಟಬಂಧನದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ಎಲ್ಲರೂ ತಮ್ಮ ಖುರ್ಚಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಕರ್ನಾಟಕದ ಮಾದರಿಯ ಮಜಬೂರಿ ಸರ್ಕಾರ ಬೇಕೋ ಬಜಬೂತಾದ ಸರ್ಕಾರ ಬೇಕೋ, ಕ್ಲಾರಿಟಿ ಬೇಕೋ ಕನ್ಫ್ಯೂಷನ್ ಬೇಕೋ, ವಿಕಾಸವಾದ ಬೇಕೋ ವಂಶವಾದಬೇಕೋ ಎಂಬುದನ್ನು ನಿಮ್ಮ ಒಂದೊಂದು ಮತವೂ ನಿರ್ಧರಿಸಲಿದೆ ಎಂದು ಮೋದಿ ಜನತೆಗೆ ಹೇಳಿದ್ದಾರೆ.
SCROLL FOR NEXT