ರಾಜ್ಯ

ಆಪರೇಷನ್ ಕಮಲ ಆಡಿಯೋ ಪ್ರಕರಣ: ಬಿಎಸ್ ವೈ ಅರ್ಜಿ ಕುರಿತು ಇಂದು 'ಹೈ' ತೀರ್ಪು

Lingaraj Badiger
ಕಲಬುರಗಿ: ಆಪರೇಷನ್‌ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ಹೈಕೋರ್ಟ್‌ ನ ಕಲಬುರಗಿ ಪೀಠ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿದೆ.
ಬಿಎಸ್ ವೈ ಅರ್ಜಿಗೆ ಸಂಬಂಧಿಸಿದಂತೆ ವಾದ - ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಪ್ರಲ್ಹಾದ್‌ ಗೋವಿಂದರಾವ್‌ ಮಾಲೀಪಾಟೀಲ್‌ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.
ಯಡಿಯೂರಪ್ಪ ಪರ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದರು. ಶಾಸಕ ಶಿವನಗೌಡ ನಾಯಕ ಹಾಗೂ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರ ಎಂ.ಬಿ.ಮರಮಕಲ್‌ ಪರವಾಗಿ ವಕೀಲ ಅಶೋಕ ಹಾರನಹಳ್ಳಿ ವಾದಿಸಿದರು. ಇದೇವೇಳೆ ಸರ್ಕಾರದ ಪರವಾಗಿ ಎಎಜಿ ಸಂಜಯ್‌ ಚೌಟ್‌ ವಾದ ಮಂಡಿಸಿದರು.
ಎಫ್‌ಐಆರ್‌ನಲ್ಲಿ ಹೇಳಿರುವಂತೆಯೇ 10 ಕೋಟಿ ರು. ಚುನಾವಣೆ ವೆಚ್ಚಕ್ಕಾಗಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇಡೀ ಆಡಿಯೋದಲ್ಲಿ ಎಲ್ಲಿಯೂ ಲಂಚದ ವಿಚಾರವಾಗಿ ಮಾತನ್ನು ಯಡಿಯೂರಪ್ಪವರು ಆಡಿಲ್ಲ ಎಂದು ಸಿ.ವಿ.ನಾಗೇಶ್ ವಾದಿಸಿದರು.
ಚುನಾವಣೆ ವೆಚ್ಚವೆಂದು ಹಣ ಕೊಡುವ ಮಾತಿದೆ. ಹೀಗಾಗಿ ಈ ಪ್ರಕರಣ ವಿಚಾರಣೆಗೆ ಅಂಗೀಕರಿಸದೆ ರದ್ದು ಪಡಿಸಬೇಕು ಅಥವಾ ವಿಚಾರಣೆಗೆ ಮಧ್ಯಂತರ ತಡೆ ನೀಡಬೇಕು ಎಂದು ನಾಗೇಶ್ ಕೋರಿದರು.
SCROLL FOR NEXT