ಬೆಂಗಳೂರು: ಏರೋ ಇಂಡಿಯಾ ಕಾರು ಪಾರ್ಕಿಂಗ್ ನಲ್ಲಿ ಬೆಂಕಿಗೆ ಆಹುತಿಯಾದ ಎಲ್ಲಾ ಕಾರಿಗೂ ವಿಮೆ ಮೊತ್ತ ದೊರಕಲಿದೆ. ಕಾರು ಬೆಂಕಿಗೆ ಆಹುತಿಯಾದಾಗ ಕಾರು ಮಾಲೀಕರು ಏನು ಮಾಡಬೇಕು ಅನ್ನೋ ವಿವರ ಇಲ್ಲಿದೆ.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಯಲಂಹಕ ವಾಯು ನೆಲೆಯ ಪಾರ್ಕಿಂಗ್ನಲ್ಲಿನ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಕಾರುಗಳಿಗೆ ವಿಮೆ ಪರಿಹಾರ ದೊರೆಯಲಿದ್ದು, ಈ ಕಾರುಗಳಿಗೆ OD(Own damage) ಅಥವಾ Natural Disasters ವಿಮೆ ಅಡಿಯಲ್ಲಿ ಮಾಲೀಕರಿಗೆ ಮೊತ್ತ ಸಿಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಮಾ ಕಂಪನಿ ಅಧಿಕಾರಿಗಳು, 'ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದರೆ Total loss (ಸಂಪೂರ್ಣ ನಷ್ಟ) ವಿಭಾಗದಡಿ ಕಾರಿನ ಮೊತ್ತ ಸಿಗಲಿದೆ. ಅಥವಾ ಕಾರಿನ ಟಾಪ್, ಅಥವಾ ಇತರೆ ಬಿಡಿಭಾಗಗಳು ಬೆಂಕಿಗೆ ಆಹುತಿಯಾಗಿದ್ದರೆ partial loss (ಭಾಗಶಃ ನಷ್ಟ) ವಿಭಾಗದಡಿ ಹಣ ದೊರಕಲಿದೆ' ಎಂದು ಹೇಳಿದ್ದಾರೆ.
ಆದರೆ ಆಯಾ ವಿಮಾ ಕಂಪೆನಿಗಳಲ್ಲಿ ಆಯಾ ನಿಯಮಗಳಿರುತ್ತದೆ. ಕಾರು ಮಾಲೀಕರು ಆಯಾ ವಿಮಾ ಕಂಪೆನಿಯನ್ನು ಸಂಪರ್ಕಿಸಿದರೆ ವಿಮಾ ಕಂಪೆನಿಯ ವ್ಯಕ್ತಿಗಳು, ಸಂಪೂರ್ಣ ಬೆಂಕಿಗೆ ಆಹುತಿಯಾದ ಕಾರನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ. ಬಳಿಕ ಫೋಟೋ ಹಾಗೂ ಇತರ ದಾಖಲೆಗಳನ್ನ ಪಡೆದು ಕಾರಿನ insured declared value(IDV) ಗರಿಷ್ಠ ಶೇಕಡಾ 90 ರಷ್ಟು ಮೊತ್ತ ಮಾಲೀಕರಿಗೆ ಸಿಗಲಿದೆ. ಕೆಲ ವಿಮಾ ಕಂಪೆನಿಗಳಿಗೆ ಮಾಲೀಕರು ಹಣ ಕ್ಲೈಮ್ ಮಾಡಲು ಕ್ಲೈಮ್ ಫಾರ್ಮ್ ಜೊತೆಗೆ FIR(First Information reprt) ಕಾಪಿ ಕೂಡ ನೀಡಬೇಕು. ಕಾರು ಮಾಲೀಕರು ಪೊಲೀಸ್ ದೂರು ನೀಡಿ FIR ಕೂಡ ದಾಖಲಿಸಬೇಕು.
ಬಳಿಕ ವಿಮಾ ಕಂಪೆನಿ ಬಳಿ ಫಾರ್ಮ್ ಭರ್ತಿ ಮಾಡಿ ಕ್ಲೈಮ್ ಮಾಡಬೇಕು. ಆಯಾ ವಿಮಾ ಕಂಪೆನಿ ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತದೆ. ಇದರ ಗರಿಷ್ಠ ಅವಧಿ 20 ರಿಂದ 30 ದಿನ. 30 ದಿನದ ಬಳಿಕ ವಿಮಾ ಕಂಪೆನಿ ಕಾರಿನ IDV ಮೊತ್ತದ ಗರಿಷ್ಠ 80 ರಿಂದ 90 ಶೇಕಡಾ ಮೊತ್ತವನ್ನು ಕಾರಿನ ಮಾಲೀಕರಿಗೆ ನೀಡುತ್ತದೆ. ಒಂದು ವೇಳೆ ಕಾರು ಖರೀದಿಸುವಾಗ ವಿಮೆ ಜೊತೆಗೆ Return to Invoice (RTI) ಪಾಲಿಸಿ ಪಡೆದುಕೊಂಡಿದ್ದರೆ, ಬೆಂಕಿಗೆ ಆಹುತಿಯಾದ ಕಾರಿನ ಬದಲು ವಿಮಾ ಕಂಪೆನಿ ಹೊಸ ಕಾರನ್ನು ನೀಡು ಸಾಧ್ಯತೆ ಕೂಡ ಇದೆ. ಮಾಲೀಕರು ರಸ್ತೆ ತೆರಿಗೆ ಮಾತ್ರ ಪಾವತಿಸಿ ಹೊಸ ಕಾರನ್ನು ಪಡೆದುಕೊಳ್ಳಬಹುದು.
ಮಾಲೀಕರ ತಪ್ಪಿನಿಂದ ಬೆಂಕಿಗೆ ಆಹುತಿಯಾಗಿದ್ದರೆ ವಿಮೆ ಸಿಗುವುದಿಲ್ಲ. ಉದಾಹರಣೆಗೆ ಮಾಲೀಕ ಕಾರಿಗೆ ಹೆಲೋಜಿನ್ ಲೈಟ್, ಅಥವಾ ಇತರ ಲೈಟ್ ಅಳವಡಿಸಿದ ಕಾರಣ ಲೈಟ್ ಹೀಟ್ ಅಥವಾ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಕಾರು ಭಸ್ಮವಾಗಿದ್ದರೆ ವಿಮೆ ಅನ್ವಯವಾಗುವುದಿಲ್ಲ. ಅಂತೆಯೇ ಯಾವುದೇ ರೀತಿ ಮಾಡಿಫಿಕೇಶನ್ ಮಾಡದೇ, ಕಾರು ತನ್ನಿಂದ ತಾನೆ ಶಾರ್ಟ್ ಸರ್ಕ್ಯೂಟ್ ಅಥವಾ ಇನ್ಯಾವುದೋ ಕಾರಣದಿಂದ ಬೆಂಕಿ ಹೊತ್ತಿಕೊಂಡರೆ ವಿಮೆ ಅನ್ವಯವಾಗಲಿದೆ.
ಏರೋ ಇಂಡಿಯಾ ಪಾರ್ಕಿಂಗ್ನಲ್ಲಿ ನಡೆದ ಅವಘಡ ಆಕಸ್ಮಿಕವಾಗಿ ನಡೆದ ಕಾರಣ ಬೆಂಕಿಗೆ ಆಹುತಿಯಾದ ಎಲ್ಲಾ ಕಾರಿಗೆ ವಿಮೆ ಮೊತ್ತ ಸಿಗಲಿದೆ. ಇನ್ನು ಕಾರಿನ ಬಿಡಿ ಭಾಗಗಳು ಬೆಂಕಿಗೆ ಆಹುತಿಯಾಗಿದ್ದರೆ, ಕಾರಿನ ರಿಪೇರಿ ಮೊತ್ತವನ್ನು ವಿಮಾ ಕಂಪೆನಿ ನೀಡಲಿದೆ. ಆದರೆ ಯಾವುದೇ ವಿಮಾ ಕಂಪನಿಗಳು ಕಾರಿನ ಮೊತ್ತವನ್ನು ಮಾತ್ರ ನೀಡಲಿದೆ. ರಸ್ತೆ ತೆರಿಗೆ ಮೊತ್ತವನ್ನ ಯಾವುದೇ ವಿಮಾ ಕಂಪನಿ ನೀಡುವುದಿಲ್ಲ. ಹೀಗಾಗಿ ಬೆಂಕಿಗೆ ಆಹುತಿಯಾದ ಮಾಲೀಕರಿಗೆ ರಸ್ತೆ ತೆರೆಗೆ ಮೊತ್ತ ನಷ್ಟವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos