ರಾಜ್ಯ

ಸಾಹಿತ್ಯ ಸಮ್ಮೇಳನ: ಮಹಿಳೆಯರ ಪೂರ್ಣಕುಂಭ ಮೆರವಣಿಗೆ ನಂತರ ಇದೀಗ ಸೀರೆಯ ವಿವಾದ!

Sumana Upadhyaya

ಧಾರವಾಡ: ಇತ್ತೀಚೆಗೆ ಧಾರವಾಡದಲ್ಲಿ ಮುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳ ಪೂರ್ಣಕುಂಭ ಸ್ವಾಗತಕ್ಕೆ ನಿಂತ ಮಹಿಳೆಯರು ಧರಿಸಿದ ಸೀರೆಯ ಬಗ್ಗೆ ವಿವಾದ ಸೃಷ್ಟಿಯಾಗಿದೆ.

ಸಮ್ಮೇಳನದಲ್ಲಿ ಮಹಿಳೆಯರು ಧರಿಸಿದ 5 ಮೀಟರ್ ಗಳ ಸೀರೆಯನ್ನು ಕರ್ನಾಟಕದಿಂದ ಖರೀದಿಸುವ ಬದಲು ಸಂಘಟಕರು ಗುಜರಾತ್ ನಿಂದ ತರಿಸಿದ್ದಾರೆ ಎಂಬುದು ಆರೋಪವಾಗಿದೆ.

ಸಮ್ಮೇಳನ ಉದ್ಘಾಟನೆಯಲ್ಲಿ ಅತಿಥಿಗಳ ಪೂರ್ಣ ಕುಂಭ ಸ್ವಾಗತಕ್ಕೆ ಸುಮಾರು 1,051 ಸೀರೆಗಳನ್ನು ತರಿಸಲಾಗಿತ್ತು. ಗುಜರಾತ್ ನಲ್ಲಿ ಸುಲಭವಾಗಿ ಕಡಿಮೆ ಬೆಲೆಗೆ ಸೀರೆಗಳು ಸಿಕ್ಕಿದ ಕಾರಣ ಅಲ್ಲಿಂದ ತರಿಸಲಾಗಿದೆ ಎಂಬುದು ಸಂಘಟಕರ ಸಬೂಬಾಗಿದೆ.

ನಮ್ಮ ರಾಜ್ಯದಲ್ಲಿ ಇಳಕಲ್ ಸೀರೆಯಂತಹ ಸೀರೆಗಳನ್ನು ತಯಾರಿಸುವಾಗ ಸಂಘಟಕರು ಹೊರ ರಾಜ್ಯದಿಂದ ತರುಸುವ ಅವಶ್ಯಕತೆಯೇನಿತ್ತು? ಗಂಗಾವತಿ, ಮೈಸೂರು, ಮೊಳಕಾಲ್ಮೂರು, ಇಳಕಲ್ ಗಳಲ್ಲಿ ಉತ್ತಮ ಗುಣಮಟ್ಟದ ಸಾಂಪ್ರದಾಯಿಕ ಸೀರೆಗಳನ್ನು ತಯಾರಿಸುತ್ತಾರೆ.

ನಮ್ಮ ರಾಜ್ಯದಿಂದಲೇ ಸೀರೆ ತರಿಸಿದರೆ ಸಾಂಪ್ರದಾಯಿಕ ಸೀರೆ ಉತ್ಪಾದಕರಿಗೆ ಉದ್ಯೋಗ ಮತ್ತು ಆದಾಯ ಕೂಡ ಸೃಷ್ಟಿಯಾಗುತ್ತದೆ ಎಂದು ಕನ್ನಡಪರ ಕಾರ್ಯಕರ್ತರೊಬ್ಬರು ಹೇಳುತ್ತಾರೆ. ಇದು ಕನ್ನಡ ಸಮ್ಮೇಳನದಲ್ಲಿ ಕನ್ನಡದ ಜನತೆಗೆ ಮಾಡಿದ ಅವಮಾನ ಎಂದು ಕಾರ್ಯಕರ್ತರು, ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸುತ್ತಾರೆ.

ಈ ಬಗ್ಗೆ ತಮಗೇನು ಗೊತ್ತಿಲ್ಲ. ಹಲವು ಸಮಿತಿಗಳು ಸೀರೆ ವಿತರಣೆಯ ಜವಾಬ್ದಾರಿ ಹೊತ್ತಿದ್ದವು ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗರಾಜ್ ಅಂಗಡಿ.
ಸಮಿತಿ ಸದಸ್ಯರು ಸ್ಥಳೀಯ ವ್ಯಾಪಾರಿಗಳನ್ನು ಕೇಳಿದಾಗ ಯಾರು ಕೂಡ ನಿಗದಿತ ಸಮಯಕ್ಕೆ ಸೀರೆ ನೀಡುವ ಭರವಸೆ ನೀಡಲಿಲ್ಲ. ಅಲ್ಲದೆ ಗುಜರಾತ್ ನಿಂದ ತಂದ ಸೀರೆಗಿಂತ ಬೆಲೆ ಹೆಚ್ಚಾಗಿತ್ತು ಎನ್ನುತ್ತಾರೆ ಮೆರವಣಿಗೆ ಸಮಿತಿ ಅಧ್ಯಕ್ಷ ಮತ್ತು ಪರಿಷತ್ ಸದಸ್ಯ ಶ್ರೀನಿವಾಸ್ ಮನೆ.

ಬೆಳಗಾವಿಯ ಸಗಟು ವ್ಯಾಪಾರಿಯೊಬ್ಬರು ಪ್ರತಿ ಸೀರೆಗೆ 210 ರೂಪಾಯಿಗಳಂತೆ ಹೇಳಿದರೆ ಬೇರೆಲ್ಲ ವ್ಯಾಪಾರಿಗಳು ಪ್ರತಿ ಸೀರೆಗೆ 320 ರೂಪಾಯಿ ಕೇಳಿದರು. ಅಲ್ಲದೆ ಯಾರೂ ಕೂಡ ಸಮಯಕ್ಕೆ ಸರಿಯಾಗಿ ನೀಡಬಹುದೆಂದು ಹೇಳಲಿಲ್ಲ. ಹೀಗಾಗಿ ಗುಜರಾತ್ ನಿಂದ ತರಿಸಬೇಕಾಯಿತು ಎಂದರು.

SCROLL FOR NEXT