ರಾಜ್ಯ

ಶಿವಮೊಗ್ಗ: ತುಂಗಾ ನದಿ ದಾಟಲು ಅನೇಕ ಜನರಿಗೆ ಈ ತೆಪ್ಪ ಮತ್ತು ಮಲ್ಲಣ್ಣನೇ ಆಸರೆ!

Sumana Upadhyaya

ಶಿವಮೊಗ್ಗ: ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ತಮ್ಮ ತೆಪ್ಪದ ಮೂಲಕ 76ರ ವಯಸ್ಸಿನ ಮಲ್ಲಣ್ಣ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ನಿತ್ಯವೂ ದಾಟಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅಲ್ಲದೆ ಅನೇಕ ಮಂದಿಯ ಪ್ರಾಣ ಉಳಿಸಿದ್ದಾರೆ.

ತುಂಗಭದ್ರಾ ನದಿ ದಂಡೆಯ ಒಂದು ಬದಿಯಲ್ಲಿ ಶಿವಮೊಗ್ಗದ ಹಳೆ ನಗರವಿದ್ದರೆ ಇನ್ನೊಂದು ಬದಿಯಲ್ಲಿ ಹಳ್ಳಿಯಿದೆ. ಬೆಂಗಳೂರು-ಹೊನ್ನಾವರ ಬೈಪಾಸ್ ರಸ್ತೆಯಲ್ಲಿ ನದಿಯ ಒಂದು ಬದಿ ಗ್ರಾಮಸ್ಥರು ಹಳೆ ನಗರ ಮತ್ತು ನಗರದ ಮುಖ್ಯ ಭಾಗಗಳಿಗೆ ಹೋಗಬೇಕಾದರೆ 5 ಕಿಲೋ ಮೀಟರ್ ಸುತ್ತು ಹಾಕಿಕೊಂಡು ಬರಬೇಕು. ಇದಕ್ಕಾಗಿ ಜನರು ಮಲ್ಲಣ್ಣನ ದೋಣಿಯ ಮೂಲಕ ನದಿ ದಾಟಿ ನಗರದ ಆಚೆ ಭಾಗಕ್ಕೆ ಹೋಗುತ್ತಾರೆ. ಇದು ಹತ್ತಿರವಾಗುತ್ತದೆ.

ತುಂಗಭದ್ರಾ ನದಿ ದಾಟುವವರಿಗೆ ದೋಣಿ ಮೂಲಕ ಸಾಗಿಸುವ ಕಾಯಕದಲ್ಲಿ ಮಲ್ಲಣ್ಣ ಕಳೆದ 60 ವರ್ಷಗಳಿಂದ ನಿರತರಾಗಿದ್ದಾರೆ. ತಮ್ಮ ಕಾಯಕದ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಇದು ನನ್ನ ಪೂರ್ವಜರಿಂದಲೇ ಬಂದ ಕಾಯಕವಾಗಿದ್ದು ನನ್ನ ತಂದೆ ಕೂಡ ಇದೇ ಕೆಲಸ ಮಾಡುತ್ತಿದ್ದರು. ನಾನು 15 ವರ್ಷದವನಾಗಿದ್ದಾಗಲೇ ಈ ಕೆಲಸ ಮಾಡಲಾರಂಭಿಸಿದೆ. ಅದು ನಂತರ ನನ್ನ ಜೀವನದ ವೃತ್ತಿಯಾಯಿತು. ಜನರು ಎಷ್ಟು ಕೊಡುತ್ತಾರೋ ಅಷ್ಟನ್ನು ಸ್ವೀಕರಿಸಿ ಜೀವನ ಸಾಗಿಸುತ್ತಿದ್ದೇನೆ ಎನ್ನುತ್ತಾರೆ.

ಮಲ್ಲಣ್ಣನವರು ವರ್ಷದ 365 ದಿನಗಳ ಕಾಲವೂ ದುಡಿಯುತ್ತಾರೆ ಎನ್ನುವುದು ವಿಶೇಷ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಿಂದಾಗಿ ಚಳಿ, ಬೇಸಿಗೆಯಲ್ಲಿ ಕೂಡ ನೀರು ಇರುತ್ತದೆ. ಮಡರಿ ಪಾಳ್ಯ, ಸವೈ ಪಾಳ್ಯ, ವಾಡಿ-ಎ-ಹುಡ, ಉರ್ಗದೂರ್ ಮತ್ತು ನೆರೆಹೊರೆಯ ಗ್ರಾಮಸ್ಥರು ಮಲ್ಲಣ್ಣನವರ ದೋಣಿಯನ್ನು ನದಿ ದಾಟಲು ನಂಬಿಕೊಂಡಿರುತ್ತಾರೆ.

ಗಾಂಧಿ ಬಜಾರ್ ಗೆ ಹೋಗಲು ಬಸ್ಸು ಸೇವೆಯಿಲ್ಲ. ಜೆಪಿಎನ್ ಹೈಸ್ಕೂಲ್, ಜೆಪಿಎನ್ ಕಾಲೇಜು, ಇಂಡಿಯನ್ ಸ್ಕೂಲ್ ಮತ್ತು ಇತರ ಆಫೀಸು, ಕಚೇರಿಗಳಲ್ಲಿ ಕೆಲಸ ಮಾಡುವವರು ಮಲ್ಲಣ್ಣನವರ ದೋಣಿಯನ್ನೇ ನಂಬಿಕೊಂಡಿರುತ್ತಾರೆ. ಬೆಳಗ್ಗೆ 8.30ರಿಂದ ಸಂಜೆ 6.30ರವರೆಗೆ ಮಲ್ಲಣ್ಣ ದೋಣಿ ಓಡಿಸುತ್ತಾರೆ.

ಇನ್ನೊಂದು ವಿಶೇಷತೆಯೆಂದರೆ ಇಷ್ಟು ವರ್ಷಗಳ ತಮ್ಮ ಸೇವೆಯಲ್ಲಿ ಮಲ್ಲಣ್ಣನವರು ಸುಮಾರು 40 ಮಂದಿಯ ಪ್ರಾಣ ಉಳಿಸಿದ್ದಾರಂತೆ. ಅದರಲ್ಲೂ ಹೆಚ್ಚಾಗಿ ಪ್ರೀತಿ, ಪ್ರೇಮ ವೈಫಲ್ಯವೆಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಯುವಕ-ಯುವತಿಯರನ್ನು. ಈ ಇಳಿವಯಸ್ಸಿನಲ್ಲಿ ಕೂಡ ಮಲ್ಲಣ್ಣ ದಿನಕ್ಕೆ 200ರಿಂದ 300 ರೂಪಾಯಿ ಗಳಿಸುತ್ತಾರಂತೆ. ಸರ್ಕಾರದಿಂದ, ಸಂಘ-ಸಂಸ್ಥೆಗಳಿಂದಾಗಲಿ ಯಾವುದೇ ನೆರವನ್ನು ಕೂಡ ನಿರೀಕ್ಷಿಸಿಲ್ಲ. ಈ ಸೇವೆಯಿಂದ ಆತ್ಮತೃಪ್ತಿ ಸಿಗುತ್ತದೆ ಎನ್ನುತ್ತಾರೆ ಮಲ್ಲಣ್ಣ.

SCROLL FOR NEXT