ಮೂಡಿಗೆರೆ: ಹೆಂಡ ಕುಡಿಯೋಕೆ ಹಣ ಕೊಡಲಿಲ್ಲ ಎಂಬ ಕೋಪಕ್ಕೆ ಮಗನೊಬ್ಬ ಹೆತ್ತ ತಾಯನ್ನೇ ದೊಣ್ನೆಯಿಂದ ಹೊಡೆದು ಕೊಂದು ಶವವನ್ನು ಬೀದಿಗೆಸೆದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೀನಾಕ್ಷಿ ಹತ್ಯೆಗೀಡಾದ ದುರ್ದೈವಿ. ಈಕೆಯ ಪುತ್ರ ವಿ. ಗಣೇಶ್(48) ಮದ್ಯ ವ್ಯಸನಿಯಾಗಿದ್ದು ಕುಡಿದಿದ್ದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ್ದಾನೆ.
ಈತ ಅದೇ ಗ್ರಾಮದಲ್ಲಿ ತಾಯಿಯೊಡನೆ ವಾಸವಿದ್ದು ಕೆಲ ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡಿದ್ದ. ಆಗಿನಿಂದಲೂ ತಾಯಿಯೇ ಮನೆಗೆಲಸ ಮಾಡಿ ದುಡಿದು ಮಗನ ಹೊಟ್ಟೆ ಹೊರೆಯುತ್ತಿದ್ದಳು.ಇದಾಗಿ ಕೆಲ ದಿನಗಳ ಹಿಂದೆ ಮೀನಾಕ್ಷಿಗೆ ಸರ್ಕಾರದಿಂದ 1500 ರು. ಪಿಂಚಣಿ ಹಣ ಬಂದಿದೆ. ಈ ಹಣ ತನಗೆ ನೀಡುವಂತೆ ಗಣೇಶ್ ತಾಯಿಯನ್ನು ಕೇಳಿದ್ದಾನೆ.
ಈ ವಿಚಾರ ನಿರಾಕರಿಸಿದ್ದ ತಾಯಿ ಜತೆ ಗಣೇಶ್ ಹಲವು ಬಾರಿ ಜಗಳವಾಡಿದ್ದ. ಆದರೆ ಬುಧವಾರ ರಾತ್ರಿ ಮದ್ಯಪಾನ ಮಾಡಿ ಬಂದಿದ್ದ ಗಣೇಶ್ ಮತ್ತೆ ಹಣ ನೀಡಲು ತಾಯಿಯನ್ನು ಪೀಡಿಸಿದ್ದಾನೆ. ಈ ವೇಳೆ ಮಾತು ವಿಕೋಪಕ್ಕೆ ತಿರುಗಿದೆ. ಕೆರಳಿದ ಗಣೇಶ್ ದೊಣ್ಣೆಯಿಂದ ತಾಯಿಗೆ ಬಲವಾಗಿ ಹೊಡೆದಿದ್ದಾನೆ. ಏಟಿನಿಂದಾಗಿ ಗಂಬೀರ ಗಾಯಗೊಂಡ ಮೀನಾಕ್ಷಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಶವವನ್ನು ರಸ್ತೆ ಮೇಲೆ ಎಸೆದಿದ್ದಾನೆ.
ಗುರುವಾರ ಬೆಳಿಗ್ಗೆ ಗ್ರಾಮಸ್ಥರು ರಸ್ತೆ ಮೇಲಿದ್ದ ಶವ ಕಂಡಾಗ ಘಟನೆ ಬೆಳಕು ಕಂಡಿದೆ. ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.