ರಾಜ್ಯ

ಗಣರಾಜ್ಯೋತ್ಸವಕ್ಕೆ ದೆಹಲಿ ಪರೇಡ್ ನಲ್ಲಿ ಭಾಗವಹಿಸಿದ ಮೈಸೂರಿನ ಚಹಾ ಮಾರುವವರ ಪುತ್ರಿ ಚಂದನಾ!

Sumana Upadhyaya

ಮೈಸೂರು; ಇಲ್ಲಿನ ಚಹಾ ಮಾರುವ ವ್ಯಕ್ತಿ ರಾಜೇಂದ್ರ ಕುಮಾರ್ ಅವರ ಪುತ್ರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿ ತನ್ನ ಹೆತ್ತವರಿಗೆ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ.

ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯದಿಂದ ಆಯ್ಕೆಯಾದ ಚಂದನಾ ಎಂ ಆರ್ ಮೈಸೂರು ಜಿಲ್ಲೆಯಿಂದ ಆಯ್ಕೆಯಾದ ಮೊದಲ ಮಹಿಳಾ ಎನ್ ಸಿಸಿ ಕೆಡೆಟ್ ಆಗಿದ್ದು 1800 ಮಂದಿ ಅಭ್ಯರ್ಥಿಗಳಲ್ಲಿ ಆಯ್ಕೆಯಾದರು. ದೆಹಲಿಯ ರಾಜ್ ಪಥ್ ರಸ್ತೆಯಲ್ಲಿ ಎನ್ ಸಿಸಿ ಕಾಂಟಿಂಜೆಟ್ಸ್ ನ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿ ಗಮನ ಸೆಳೆದರು.

ಮೈಸೂರಿನ ಕುಪ್ಪಣ್ಣ ಪಾರ್ಕ್  ಬಳಿ ವಾಣಿ ಟಿಫಿನ್ಸ್ ಎಂಬ  ಸಣ್ಣ ಚಹಾ ಮತ್ತು ಉಪಹಾರ ಅಂಗಡಿಯನ್ನು ರಾಜೇಂದ್ರ ನಡೆಸುತ್ತಿದ್ದಾರೆ. ಚಂದನಾ ಅವರ ತಾಯಿ ಪುಷ್ಪಲತಾ ಕೂಡ ಮಗಳಿಗೆ ಸಿಕ್ಕಿದ ಅವಕಾಶದಿಂದ ಖುಷಿಯಾಗಿದ್ದಾರೆ. ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಗಳನ್ನು ನೋಡಿರುವುದು ತುಂಬಾ ಖುಷಿ ನೀಡಿದೆ. ಕಳೆದ ವರ್ಷ ಪ್ರಯತ್ನಿಸಿದಾಗ ಅವಕಾಶ ಸಿಕ್ಕಿರಲಿಲ್ಲ. ಈ ವರ್ಷ ಕೆಲಸ ಉತ್ತಮವಾಗಿ ಮಾಡಿ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ ಎಂದಳು.

ದೆಹಲಿಯಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಚಂದನಾ, ನನ್ನ ಕನಸಿಗೆ ಮೀರಿದ ಅವಕಾಶ ಸಿಕ್ಕಿದೆ ನನಗೆ. ನಾವು ಪರೇಡ್ ಮಾಡುತ್ತಿರುವಾಗ ನೂರಾರು ಜನರು ಪ್ರೋತ್ಸಾಹ ನೀಡುತ್ತಿದ್ದರು. ಪರೇಡ್ ಮುಗಿದ ಮೇಲೆ ಖುಷಿಯಿಂದ ಅಳುಬಂತು ಎಂದು ಹೇಳುತ್ತಾರೆ.

ಚಂದನಾಗೆ ಸೇನಾಧಿಕಾರಿಯಾಗಬೇಕೆಂಬ ಬಯಕೆಯಿದೆಯಂತೆ. ಅದಕ್ಕೆ ಪುಟ್ಟ ಹೆಜ್ಜೆಯಾಗಿ ಇಲ್ಲಿಂದ ಪಯಣ ಆರಂಭವಾಗಿದೆ ಎನ್ನುತ್ತಾರೆ.

SCROLL FOR NEXT