ರಾಜ್ಯ

ಫೆಬ್ರವರಿ 9ರಿಂದ ಧರ್ಮಸ್ಥಳ ಬಾಹುಬಲಿಗೆ 4ನೇ ಮಹಾಮಸ್ತಕಾಭಿಷೇಕ!

Raghavendra Adiga
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಫೆಬ್ರವರಿ 9ರಿಂದ 18ರವರೆಗೆ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ.
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ನೆಲೆಸಿರುವ ತ್ಯಾಗ, ವೈರಾಗ್ಯ ಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನೆರವೇರಲಿದ್ದು ಕಾರ್ಯಕ್ರಮದ ಸಕಲ ಸಿದ್ದತೆಗಳು ಅಂತಿಮ ಹಂತದಲ್ಲಿದೆ.
"ಎಲ್ಲಾ ಜನರಲ್ಲಿ ಶಾಂತಿ, ಸಂಯಮ, ಸಹಸೆ, ಸಹಬಾಳ್ವೆ ಸಂದೇಶ ಸಾರಲು ಈ ಮಹಾಮಸ್ತಕಾಭಿಷೇಕ ನಡೆಯಲಿದೆ.ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಇರಬೇಕೆಂದು ಬಾಹುಬಲಿಯ ಉದ್ದೇಶವಾಗಿತ್ತು.ಎಲ್ಲಾ ಧರ್ಮಗಳಲ್ಲಿ ಶಾಂತಿಯನ್ನು ಬೋಧಿಸಲು ಶ್ರೀ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ" ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಮಸ್ತಕಾಭಿಷೇಕದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ದೇಶ, ವಿದೇಶದಿಂದ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಇವರ ವಾಸಕ್ಕಾಗಿ ವಿಶೇಷ ವ್ಯವಸ್ಥೆ ಸಹ ಮಾಡಲಾಗಿದೆ.
ಬಾಹುಬಲಿ ಮಜ್ಜನ ವೀಕ್ಷಣೆಗಾಗಿ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.ವಿಗ್ರಹದ ಸುತ್ತಲೂ ಅಟ್ಟಣಿಗೆ ಕಟ್ಟುವ ಕಾರ್ಯ ಅಂತಿಮ ಹಂತದಲ್ಲಿದೆ.ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಧರ್ಮಸ್ಥಳದಲಿ ಸಂತರ ಸಮ್ಮೇಳನ ಸಹ ನಡೆಯಲಿದೆ. ಇದರಲ್ಲಿ ವಿವಿಧ ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ.
ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ನಡೆಯುವ ಮೆರವಣಿಗೆಯಲ್ಲಿ ವಿವಿಧ ಜಾನಪದ ನೃತ್ಯತಂಡಗಳು ಭಾಗವಹಿಸಲಿದೆ. ಅಲ್ಲದೆ ಬಾಹುಬಲಿ ಜೀವನ ಚಿತ್ರಣ ಬಿಂಬಿಸುವ ಭಿತ್ತಿಚಿತ್ರಗಳ ಪ್ರದರ್ಶನ ಕೂಡ ಇರಲಿದೆ.
ಇದಾಗಲೇ ಜಿಲ್ಲಾಡಳಿತ ಕಾರ್ಯಕ್ರಮಕ್ಕಾಗಿ ತಯಾರಿ ಪ್ರಾರಂಭಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಹೆಚಿನ ಪೋಲೀಸ್ ಭದ್ರತೆ ಏರ್ಪಡಿಸಲಾಗಿದೆ, ಹೊಸ ರಸ್ತೆ ನಿರ್ಮಾಣ ಕೂಡ ಕೈಗೊಳ್ಳಲಾಗಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
SCROLL FOR NEXT