ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕೊನೆಗೂ ಬಿಡಿಎ ಕುಮಾರ್ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ದೇಶದಿಂದ ಪರಾರಿಯಾಗುವ ಮೊದಲು ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಬಿಡಿಎ ಕುಮಾರ್ ಗೆ ಹಣ ನೀಡಿರುವುದಾಗಿ ತಿಳಿಸಿದ್ದ. ಬಿಡಿಎ ಕುಮಾರ್ ಯಾರೆಂಬುದು ಪೊಲೀಸರು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಬಿಡಿಎಯಲ್ಲಿ ಇಂತಹ ಅಧಿಕಾರಿ ಇಲ್ಲ ಎಂದು ಕೆಲವರು ಸ್ಪಷ್ಟಪಡಿಸಿದ್ದರು. ಇದೀಗ ಬಿಡಿಎ ಕುಮಾರ್ ಅವರನ್ನು ಪತ್ತೆಹಚ್ಚಿ ಬಲೆಗೆ ಬೀಳಿಸುವಲ್ಲಿ ಎಸ್ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಿಡಿಎ ಕುಮಾರ್ ಬಳಿ ತನ್ನ 5 ಕೋಟಿ ರೂಪಾಯಿ ಇದ್ದು ಅದನ್ನು ವಶಪಡಿಸಿಕೊಂಡು ಹೂಡಿಕೆದಾರರಿಗೆ ನೀಡಿ ಎಂದು ಮನ್ಸೂರ್ ಖಾನ್ ಪೊಲೀಸ್ ಆಯುಕ್ತರಿಗೆ ಆಡಿಯೋದಲ್ಲಿ ಮನವಿ ಮಾಡಿದ್ದ. ಬಿಡಿಎ ಕುಮಾರ್ ಎಂಬ ನಿವೇಶನ ಹಂಚಿಕೆ ಮಾಡುವ ಅಧಿಕಾರಿಯಿಂದ ಸೈಟ್ ಪಡೆದಿದ್ದವರೆಲ್ಲರೂ ಬಿಡಿಎ ಎಂಜಿನಿಯರ್ ಕುಮಾರ್ ನ ಬೆನ್ನಿಗೆ ನಿಂತಿದ್ದರು. ಬಿಡಿಎ ಕುಮಾರ್ ಎಂದರೆ ಉದ್ಯಮಿಯಾ ? ಬಿಡಿಎ ಕುಮಾರ್ ಎಂದರೆ ವಕೀಲನಾ ? ಬಿಡಿಎ ಕುಮಾರ್ ಎಂದರೆ ಬ್ರೋಕರಾ ? ಎಂದು ಕೆಲವು ಮಾಧ್ಯಮಗಳು ಬ್ರೇಕಿಂಗ್ ಸುದ್ದಿ ಹಾಕಿದ್ದವು. ಇದರಿಂದ ಪೊಲೀಸರಿಗೂ ಆತ ಯಾರು ಎಂಬುದು ಗೊತ್ತಾಗಿರಲಿಲ್ಲ.
ಇದೀಗ ಕೊನೆಗೂ ಬಿಡಿಎ ಕುಮಾರ್ ನನ್ನು ಬಂಧಿಸುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಇನ್ನು ಇದೇ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆೃ ಬಿಡಿಎ ಕುಮಾರ್ ಮನೆ ಮೇಲೆ ಎಸ್ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ವೇಳೆ ಶೋಧ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ದಾಳಿ ವೇಳೆ ಐಎಂಎ ಮನ್ಸೂರ್ ಖಾನ್ ನಿಂದ 4 ಕೋಟಿ ಪಡೆದಿರುವ ದಾಖಲೆಗಳು ಪತ್ತೆಯಾಗಿತ್ತು ಎನ್ನಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕುಮಾರ್ ನನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೇ IMA ಒಡೆತನದ ಮೂರು ಮಳಿಗೆಗಳ ಮೇಲೆ ದಾಳಿ ನಡೆಸಿ 70 ಲಕ್ಷ ಮೌಲ್ಯದ ಫಾರ್ಮಸಿ ವಸ್ತುಗಳು ಹಾಗೂ 4.40 ಲಕ್ಷ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.