ಬೆಂಗಳೂರು: ಐಎಂಎ ಸಮೂಹ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಎಸ್ಐಟಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಐಎಂಎ ಸಮೂಹ ಕಂಪನಿ ವಿರುದ್ಧ ನಿಯಮಬಾಹಿರ ವಹಿವಾಟಿನ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆ ಸಂಬಂಧ ತನಿಖೆ ನಡೆಸುವಂತೆ ಆರ್ ಬಿ ಐ ಈ ಹಿಂದೆಯೇ ಸೂಚನೆ ನೀಡಿತ್ತು. ಅದರಂತೆ, ಸರ್ಕಾರ ತನಿಖೆಯ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿ ಎಲ್. ಸಿ. ನಾಗರಾಜ್ ಅವರಿಗೆ ವಹಿಸಿತ್ತು. ಆದರೆ, ಅವರು ಐಎಂಎ ಮಾಲೀಕರಿಂದ 4.5 ಕೋಟಿ ರೂ. ಹಣ ಪಡೆದು ಐಎಂಎ ಪರವಾಗಿ ವರದಿ ನೀಡಿದ್ದರು.
ಈಗ ಐಎಂಎ ಹಗರಣ ಬೆಳಕಿಗೆ ಬಂದ ನಂತರ ತನಿಖೆ ಆರಂಭಿಸಿದ ಎಸ್ ಐ ಟಿ ಅಧಿಕಾರಿಗಳು, ನಾಗರಾಜ್ ಅವರನ್ನು ಗುರುವಾರ ವಿಚಾರಣೆಗೊಳಪಡಿಸಿದ್ದರು. ಆಗ ಹಳೆಯ ಲಂಚ ಪ್ರಕರಣದ ಪುರಾವೆಗಳು ದೊರೆತಿವೆ. ಆದ್ದರಿಂದ ಅವರನ್ನು ಬಂಧಿಸಿದ್ದು, ಸದ್ಯದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್ ಐ ಟಿ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.