ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್ ಅವರಿಂದ ವಿಶೇಷ ತನಿಖಾ ದಳ(ಎಸ್ಎಟಿ) 2.5 ಕೋಟಿ ರೂ. ವಶಪಡಿಸಿಕೊಂಡಿರುವುದಾಗಿ ಶುಕ್ರವಾರ ತಿಳಿಸಿದೆ.
ಇಂದು ರಿಚ್ಮಂಡ್ ರಸ್ತೆಯಲ್ಲಿರುವ ಐಎಂಎ ಸಂಸ್ಥೆಯ ಒಡೆತನದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಎಸ್ ಐಟಿ ಅಧಿಕಾರಿಗಳು, ಅಲ್ಲಿಂದ ಹಲವು ದಾಖಲೆಗಳನ್ನು ಪರಿಶೀಲಿಸಿದೆ. ಬಳಿಕ ನಕಲಿ ದಾಖಲೆ ಸೃಷ್ಟಿ ಆರೋಪದಡಿ ಮುನೀರ್ ಮತ್ತು ಬ್ರಿಗೆಡ್ ಬಾಬು ಎಂಬುವರನ್ನು ಬಂಧಿಸಿದೆ. ಈ ಪೈಕಿ ಮುನೀರ್ ರೌಡಿ ಶೀಟರ್ ಆಗಿದ್ದ ಎಂದು ಎಸ್ಐಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಜಿಲ್ಲಾಧಿಕಾರಿ ವಿಜಯ್ಶಂಕರ್ ಲಂಚವಾಗಿ ಪಡೆದಿದ್ದ 1.5 ಕೋಟಿ ರೂ.ವನ್ನು ನಗರದ ಬಿಲ್ಡರ್ ಒಬ್ಬರಿಗೆ ನಿವೇಶನ ಮತ್ತು ಫ್ಲಾಟ್ ಖರೀದಿಗೆಂದು ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಮೊತ್ತವನ್ನು ಬಿಲ್ಡರ್ನಿಂದ ಮುಟಗೋಲು ಹಾಕಿಕೊಳ್ಳುವಲ್ಲಿ ಎಸ್ಐಟಿ ಯಶಸ್ವಿಯಾಗಿದೆ.
ವಿಜಯ್ ಶಂಕರ್ ಅವರು ಮತ್ತೊಂದು ವ್ಯವಹಾರದಲ್ಲಿ 1 ಕೋಟಿ ರೂ. ಲಂಚ ಪಡೆದಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಆ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.