ರಾಜ್ಯ

ಉತ್ತರ ಕನ್ನಡ ಜಿಲ್ಲೆ: ಭೂ ಕುಸಿತ, ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತ

Nagaraja AB
ಕಾರವಾರ: ಉತ್ತರ ಕನ್ನಡ ಜಿಲ್ಲೆಯ  ಅಂಕೋಲಾ, ಯಲ್ಲಾಪುರ, ಭಟ್ಕಳ ಮತ್ತಿತರ ತಾಲೂಕುಗಳಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ಭೂ ಕುಸಿತವಾಗಿದ್ದು, ಹೆದ್ದಾರಿ ಬಂದ್ ಆಗಿದೆ.ಪ್ರವಾಹ ಪರಿಸ್ಥಿತಿ ಉಂಟಾಗಿದ್ದು,ಜನಜೀವನ ಅಸ್ತವ್ಯಸ್ತಗೊಂಡಿದೆ.ಅಂಕೋಲಾ ತಾಲೂಕಿನ ಜಲಾವೃತಗೊಂಡ ಗ್ರಾಮಗಳಿಂದ ಜನರನ್ನು ಬೇರೆಡೆಗೆ ಜಿಲ್ಲಾಡಳಿತ ಸ್ಥಳಾಂತರಿಸುತ್ತಿದೆ.
ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 63 ಅಂಕೋಲಾ- ಹುಬ್ಬಳ್ಳಿ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಗುರುವಾರ ಮುಂಜಾನೆ ಆರೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭೂ ಕುಸಿತ ಉಂಟಾದ ಸ್ಥಳದಲ್ಲಿದ್ದ ಲಾರಿಗೆ ಹಾನಿಯಾಗಿದ್ದು, ಅದರ ಚಾಲಕ ಗಾಯಗೊಂಡಿದ್ದಾನೆ.ಅಂಕೋಲಾ ಪೊಲೀಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮೂರು ಜೆಸಿಬಿಗಳೊಂದಿಗೆ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ಈ ಮಧ್ಯೆ ರಾಮನಗುಳಿ ಬಳಿ ಮತ್ತೊಂದು ಭೂ ಕುಸಿತ ಉಂಟಾಗಿರುವ ವರದಿ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಮಾರ್ಗವನ್ನು ಬದಲಾಯಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ಈ ಮಾರ್ಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿರಿದಾದ ರಸ್ತೆಯಲ್ಲಿ ಹೆಚ್ಚಿನ ವಾಹನಗಳ ಸಂಚಾರದಿಂದಾಗಿ ಭೂ ಕುಸಿತವಾಗಿರುವ ಸಾಧ್ಯತೆ ಇದೆ. ವೈಜ್ಞಾನಿಕ ರೀತಿಯಲ್ಲಿ ರಸ್ತೆ ಮಾಡದಿದ್ದರೆ ಇಂತಹ ಭೂ ಕುಸಿತಗಳು ಸಂಭವಿಸುತ್ತಲೇ ಇರುತ್ತವೆ ಎಂದು ದಾಬ್ಗುಳಿಯ ರಾಮಕೃಷ್ಣ ಹೆಗ್ಡೆ ಹೇಳಿದ್ದಾರೆ.
ಈ ನಡುವೆ ನಾಡಿಬಾಗ್ ನದಿ ಉಕ್ಕಿ ಹರಿಯುತ್ತಿದ್ದು, ಅಂಕೋಲಾ  ತಾಲೂಕಿನ ದಂಡೇಬಾಗ್ ಗ್ರಾಮ ಜಲಾವೃತಗೊಂಡಿದೆ. ಜಿಲ್ಲಾಡಳಿತದಿಂದ 200 ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದು, ಜನರು ವಿದ್ಯುತ್ ಇಲ್ಲದೆ ಕಾಲ ಕಳೆಯುವಂತಾಗಿದೆ. 
SCROLL FOR NEXT