ರಾಜ್ಯ

ಕಳೆದ 10 ದಿನದಲ್ಲಿ ಮೈತ್ರಿ ಸರ್ಕಾರದಿಂದ ಬರೋಬ್ಬರೀ 2 ಸಾವಿರ ಅಧಿಕಾರಿಗಳ ವರ್ಗಾವಣೆ!

Shilpa D
ಬೆಂಗಳೂರು:  ರಾಜ್ಯ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿನ ನಡುವೆಯೂ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ, ಕಳೆದ 10 ದಿನಗಳಲ್ಲಿ  ಬರೋಬ್ಬರೀ 2 ಸಾವಿರ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಇದು ಸಹಜ ವರ್ಗಾವಣೆಯಲ್ಲ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನಿಯಮಾವಳಿ ಪ್ರಕಾರ ಮೇ ಅಥವಾ ಜುಲೈ ತಿಂಗಳಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು, ಆದರೆ ಸರ್ಕಾರದ ಅಸ್ಥಿರತೆಯಿಂದಾಗಿ ಈ ಸಮಯದಲ್ಲಿ ವರ್ಗಾವಣೆ ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾಮೂಹಿಕ ವರ್ಗಾವಣೆ ಮಾಡಲಾಗಿದೆ, ಅರಣ್ಯ, ಸಮಾಜ ಕಲ್ಯಾಣ, ಸೇರಿದಂತೆ ಹಲವು ಇಲಾಖೆಗಳ ಒಟ್ಟು 1,300 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. 
ಶುಕ್ರವಾರ 131 ಪೊಲೀಸ್ ಅಧಿಕಾರಿಗಳು ವರ್ಗಾವಣೆ ಮಾಡಲಾಗಿತ್ತು, ಇದರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಡಿವೈಎಸ್ ಪಿ ಗಳು ಸೇರಿದ್ದಾರೆ, ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಆದೇಶ ಹೊರಡಿಸಿದ್ದರು, ಆದರೆ ಕೆಲವೇ ಕ್ಷಣಗಳಲ್ಲಿ ಆದೇಶ ರದ್ದಾಯಿತು,
ಯಾವುದೇ ಮಹತ್ವವಾದ ನಿರ್ಧಾರಗಳನ್ನು ಕೈಗೊಳ್ಳದಂತೆ ಸರ್ಕಾರದ ಮುಖ್ಯ ಕಾರ್ಯಗರ್ಶಿಗೆ ರಾಜ್ಯಪಾಲ ವಜುಬಾಯಿ ವಾಲಾ ನಿರ್ದೇಶನ ನೀಡಿದ್ದರೂ, ವರ್ಗಾವಣೆ ಪ್ರಕ್ರಿಯೆ ನಡೆದಿದೆ.
ಮುಂದೆ ಬರುವ ಸರ್ಕಾರ ಮತ್ತೆ ಆ ವರ್ಗಾವಣೆಗಳನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ವರ್ಗಾವಣೆಯಾದ ಸಿಬ್ಬಂದಿ ಗೆ ಅನಿಶ್ಚಿತತೆ ಮುಂದುವರಿದಿದೆ. ಅನಿಶ್ಚಿತ ಸಮಯದಲ್ಲಿ ವರ್ಗಾವಣೆ ನಡೆದಿದೆ, ಇದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹಣದ ವರ್ಗಾವಣೆ ಆಗಿರುವ ಸಾಧ್ಯತೆಯಿದೆ. ಕೆಲವು ಸರ್ಕಾರ  ಅಧಿಕಾರಿಗಳು ವರ್ಗಾವಣೆ ಏಜೆಂಟ್ ಗಳಾಗಿ ಕೆಲಸ ಮಾಡಿದ್ದಾರೆ ಎಂದು ಡಿಪಿಎಆರ್  ಅಧಿಕಾರಿಗಳು ತಿಳಿಸಿದ್ದಾರೆ.
ಇದು ವರ್ಗಾವಣೆ ಮಾಡುವ ಸಮಯವಲ್ಲ, ಹಣಕ್ಕಾಗಿ ನಡೆದಿರುವ ವರ್ಗಾವಣೆ ಮಾಡಿದ್ದಾರೆ, 5 ಲಕ್ಷದಿಂದ 1 ಕೋಟಿ ರವರೆಗೆ ಹಣದ ವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ ಮಂಜೇಗೌಡ ಆರೋಪಿಸಿದ್ದಾರೆ.
SCROLL FOR NEXT