ಬೆಂಗಳೂರು: ಸದನ ಮುಂದೂಡುವ ಪ್ರಶ್ನೆಯೇ ಇಲ್ಲ. ಇಂದೇ ವಿಶ್ವಾಸ ಮತ ಯಾಚನೆ ಮತ್ತು ತೀರ್ಪು ನೀಡಲಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಇದು ಕಲಾಪ ನಡೆಸಲು ವಿಧಾನಸೌಧಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು. ಈ ವೇಳೆ, 'ಇವತ್ತೇ ಕಡೆ, ಇಂದು ಎಲ್ಲಾ ಮುಕ್ತಾಯವಾಗುತ್ತದೆ. ವಿಶ್ವಾಸ ಮತ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದಾರೆ.
'ಇಂದೇ ಕಡೆ ದಿನ, ಇಂದು ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮತಕ್ಕೆ ಹಾಕಲಾಗುವುದು. ನಿನ್ನೆ ಇಡೀ ದಿನ ಕಲಾಪವನ್ನು ನೋಡಿದ್ದೇನೆ, ಈಗಾಗಲೇ ಸಮಯ ನಿಗದಿಯಾಗಿದೆ. ಅದರಂತೆ ಇಂದು ಎಲ್ಲಾ ಪ್ರಕ್ರಿಯೆ ಮುಗಿಯಲಿದೆ ಎಂದು ರಮೇಶ್ ಕುಮಾರ್ ತಿಳಿಸಿದರು.
ಅಂತೆಯೇ ಅತೃಪ್ತ ಶಾಸಕರು ಸ್ಪೀಕರ್ ಗೆ ಪತ್ರ ಬರೆದು ಹಾಜರಾಗಲು ಸಮಾಯಾವಕಾಶ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ, ಸ್ಪೀಕರ್ ಕೋರ್ಟ್ ಏನು ಹೇಳುತ್ತದೆ ಅದನ್ನು ಇಲ್ಲಿ ಹೇಳಲು ಆಗಲ್ಲ, ಶಾಸಕರಿಗೆ ತಿಳುವಳಿಕೆ ಕೊರತೆ ಇದೆ. ಇದಕ್ಕೆ ನಾನು ಏನೂ ಮಾಡಲಾಗಲ್ಲ. ರಾಜೀನಾಮೆ ಹೇಗೆ ಕೊಡಬೇಕು, ಸ್ಪೀಕರ್ ಏಕೆ ಪತ್ರ ಬರೆಯುತ್ತಾರೆ ಎಂಬುದು ಕೂಡ ಅವರಿಗೆ ಗೊತ್ತಿಲ್ಲ. ಕನಿಷ್ಠ ತಿಳುವಳಿಕೆಯೂ ಅವರಿಗಿಲ್ಲ. ಇದು ಅವರು ಮತ್ತು ದೇಶದ ಜನರ ಕರ್ಮ ಎಂದು ಬಹಳ ಖಾರವಾಗಿ ಹೇಳಿದರು.
ಶಾಸಕರಾಗಿ ಮೆರೆಯೋಕೆ ಗೆದ್ದು ಬರುತ್ತಾರೆ, ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಸ್ಪೀಕರ್ ನಿಮ್ಮ ದಾಯಾದಿ ಅಲ್ಲ, ಅವರು ಸುಮ್ಮನೆ ನಿಮಗೆ ಪತ್ರ ಬರೆಯುವುದಿಲ್ಲ ಎಂದು ಹೇಳಿದ ಅವರು, ಸಮಾಯಾವಕಾಶ ನೀಡುವ ಬಗ್ಗೆ ಇಲ್ಲಿ ಏನನ್ನೂ ಹೇಳುವುದಿಲ್ಲ, ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.