ರಾಜ್ಯ

ರಾಜೀನಾಮೆ ಸಲ್ಲಿಸಿ ಮರಳುತ್ತಿದ್ದ ಶಾಸಕ ಸುಧಾಕರ್ ಮೇಲೆ ಹಲ್ಲೆ ಪ್ರಕರಣ: ದೂರು ದಾಖಲು

Lingaraj Badiger
ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಧಾಕರ್ ಅವರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮರಳುತ್ತಿದ್ದಾಗ ವಿಧಾನಸೌಧದಲ್ಲಿ ಅವರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಶಾಸಕರು, ಜನಪ್ರತಿನಿಧಿಗಳ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ಬೆಂಗಳೂರು ಮೂಲದ ವಕೀಲ ಎನ್.ಪಿ ಅಮೃತೇಶ್ ಅವರು ಈ ದೂರು ಸಲ್ಲಿಸಿದ್ದು, ಜುಲೈ 10ರಂದು ಸುಧಾಕರ್ ಅವರು ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ ಮರಳುವಾಗ ಅಲ್ಲಿ ಉಪಸ್ಥಿತರಿದ್ದ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ, ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ತಿನ ಹಲವು ಸದಸ್ಯರು ಅವರನ್ನು ಎಳೆದಾಡಿ, ಸಚಿವ ಕೆ.ಜೆ.ಜಾರ್ಜ್ ಅವರ ಕಚೇರಿಗೆ ಕರೆದೊಯ್ದು ದೈಹಿಕ ಹಲ್ಲೆ ನಡೆಸಿದ್ದಲ್ಲದೆ, ರಾಜೀನಾಮೆ ಹಿಂಡಪೆಯುವಂತೆ ಒತ್ತಡ ಹೇರಿದ್ದಾರೆ. ಈ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂದು ಆರೋಪಿಸಿದ್ದಾರೆ.
ಗಲಭೆ ತಾರಕ್ಕೇರಿದಾಗ ನಗರ ಪೊಲೀಸ್ ಆಯುಕ್ತರು ಖುದ್ದು ಆಗಮಿಸಿ, ಸುಧಾಕರ್ ಅವರಿಗೆ ರಕ್ಷಣೆ ನೀಡಿ ರಾಜಭವನಕ್ಕೆ ಕರೆದೊಯ್ದಿದ್ದರು. ಸಾರ್ವಜನಿಕ ಸೇವಕರಾದ ಸುಧಾಕರ್ ಅವರನ್ನು ವಿಧಾನಸೌಧದಲ್ಲಿಯೇ ಎಳೆದಾಡಿದ್ದರೂ, ಪೊಲೀಸರು ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದು ಪೊಲೀಸರು ತಪ್ಪಿತಸ್ಥರ ರಕ್ಷಣೆಗೆ ಮುಂದಾಗಿರುವುದನ್ನು ತೋರಿಸುತ್ತದೆ. ಆದ್ದರಿಂದ ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.
SCROLL FOR NEXT