ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ . ಜಿ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನವೆಂಬರ್ 11, 2016ರಿಂದ ಸಿದ್ದರಾಮಯ್ಯ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಅಧಿಕಾರವಧಿ ಮುಗಿಯಲು ಇನ್ನೂ ನಾಲ್ಕು ತಿಂಗಳು ಬಾಕಿ ಇದೆ.
ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ರವಾಸಿರುವ ಸಿದ್ದರಾಮಯ್ಯ, ಸ್ವ ಇಚ್ಚೆಯಿಂದ ಜುಲೈ 29, 2019ರಿಂದ ಅನ್ವಯವಾಗುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಇದನ್ನು ಸ್ವೀಕರಿಸಬೇಕು ಎಂದು ಕೋರಿದ್ದಾರೆ.
ಸೈದ್ದಾಂತಿಕ ತತ್ವಗಳಿಗೆ ವಿರುದ್ಧವಾದ ಪಕ್ಷ ಅಧಿಕಾರಕ್ಕೆ ಬಂದಿದ್ದು, ತಾವು ಅಧಿಕಾರದಲ್ಲಿ ಮುಂದುವರೆದರೆ ಆ ಪಕ್ಷವನ್ನು ಒಪ್ಪಿಕೊಂಡಂತಾಗುತ್ತದೆ. ಇದುವರೆಗೆ ಪ್ರಾಧಿಕಾರದ ಕಾರ್ಯಗೌರವಕ್ಕೆ ಸಹಕರಿಸಿದ ಎಲ್ಲ ಕನ್ನಡ ಮನಸುಗಳಿಗೆ ಕೃತಜ್ಞತೆಗಳು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಪರಿಷ್ಕೃತ ಸರೋಜಿನಿ ಮಹಿಷಿ ವರದಿ, ಸರ್ಕಾರಿ ಶಾಲೆಗಳ ಬಲವರ್ದನೆ ಹಾಗೂ ಏಕರೂಪ ಸಾಪ್ಟ್ ವೇರ್ ಪಾಲಿಸಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ತಮ್ಮ ಅಧಿಕಾರವಧಿಯಲ್ಲಿ ಸಾಪ್ಟ್ ವೇರ್ ಕಂಪನಿಗಳಲ್ಲಿ ಕನ್ನಡ ಬಳಕೆ ಶೇಕಡಾ 10 ರಿಂದ ಶೇ, 90 ರಷ್ಟು ಹೆಚ್ಚಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಘೋಷಣೆ ಮತ್ತು ಪ್ರಕಟಣೆಯನ್ನು ಮಾಡಲಾಯಿತು. ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos