ಬೆಂಗಳೂರು: ಯುವ ಬ್ರಿಗೇಡ್ ನ ಸಂಸ್ಥಾಪಕ, ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ರಾಜ್ಯದ ಸಂಸದರಿಗೆ ಗ್ರಾಮ ಸ್ವರ್ಗ ಚಾಲೆಂಜ್ ಸ್ವೀಕರಿಸುವಂತೆ ಆಹ್ವಾನ ನೀಡಿದ್ದಾರೆ.
ಪ್ರತಿ ಸಂಸದ ತಮ್ಮ ವ್ಯಾಪ್ತಿಗೆ ಬರುವ ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ವಾಸ್ತವ್ಯ ಹೂಡಿ, ಸಮಸ್ಯೆಗಳನ್ನು ಮನಗಂಡು ಅಭಿವೃದ್ಧಿ ಪಡಿಸುವುದು ಗ್ರಾಮ ಸ್ವರ್ಗ ಚಾಲೆಂಜ್ ನ ಉದ್ದೇಶವಾಗಿದೆ.
ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಈ ವಿನೂತನ ಚಾಲೆಂಜ್ ನ್ನು ರಾಜ್ಯ ಸಂಸದರು ಸ್ವೀಕರಿಸಬಹುದೆಂದು ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ನೀಡಿದ್ದರು. ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಸ್ಪಂದಿಸಿದ್ದು, ಚಾಲೆಂಜ್ ನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ, ಚಾಲೆಂಜ್ ಸ್ವೀಕರಿಸಲು ತಾವು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಯೋಜನೆಯ ಜಾರಿಗೆ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗಸೂಚಿ ನೀಡಿ, ಜಾರಿಗೊಳಿಸುವಲ್ಲಿ ಸಂಘಟನೆಯ ಸಹಕಾರ ಕೋರಿದ್ದಾರೆ.