ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಭಾರೀ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ 10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಇತ್ತೀಚೆಗೆ ತಮ್ಮ ಸೇವೆಗೆ ರಾಜೀನಾಮೆ ಸಲ್ಲಿಸಿದ್ದ ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಕೆ ಅಣ್ಣಾಮಲೈಯವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕೋಲಾರ ಎಸ್ಪಿ ರೋಹಿಣಿ ಕಟೊಚ್ ಸೆಪತ್ ಅವರನ್ನು ನಿಯೋಜಿಸಲಾಗಿದೆ.
ಲೋಕಸಭಾ ಚುನಾವಣೆಗೆ ಮುನ್ನ ಹಾಸನದಿಂದ ವರ್ಗಾವಣೆಗೊಂಡಿದ್ದ ಎ ಎನ್ ಪ್ರಕಾಶ್ ಗೌಡ ಅವರನ್ನು ಮತ್ತೆ ಹಾಸನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮರು ನೇಮಕ ಮಾಡಲಾಗಿದೆ.
ಹಾಸನ ಎಸ್ಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ರಾಮನಗರಕ್ಕೆ, ರಾಮನಗರದ ಎಸ್ಪಿ ಬಿ ರಮೇಶ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಕಾರ್ಯಪಡೆ ಮತ್ತು ಜಾಗೃತ ಇಲಾಖೆಯ ಎಸ್ಪಿಯಾಗಿ ವರ್ಗ ಮಾಡಲಾಗಿದೆ. ಕೋಲಾರ್ ಗೋಲ್ಡ್ ಫೀಲ್ಡ್ ನ ಎಸ್ಪಿ ಕಾರ್ತಿಕ್ ರೆಡ್ಡಿಯನ್ನು ಕೋಲಾರ ಎಸ್ಪಿಯಾಗಿ, ಚಾಮನಗರ ಜಿಲ್ಲಾ ಎಸ್ಪಿಯಾಗಿದ್ದ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ಬೆಂಗಳೂರು ವೈರ್ ಲೆಸ್ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ರಾಯಚೂರು ಎಸ್ಪಿ ದೆಕ್ಕ ಕಿಶೋರ್ ಬಾಬು ಅವರನ್ನು ಆಂತರಿಕ ಭದ್ರತೆ ವಿಭಾಗ ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಮಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಿಬಿ ವೇದಮೂರ್ತಿಯವರನ್ನು ರಾಯಚೂರು ಎಸ್ಪಿಯಾಗಿ ವರ್ಗ ಮಾಡಲಾಗಿದ್ದು ಸಿಐಡಿ ಎಸ್ಪಿ ಹೆಚ್ ಡಿ ಆನಂದ್ ಕುಮಾರ್ ಅವರನ್ನು ಚಾಮರಾಜನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.