ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದ ಮುಸಲ್ಮಾನ ಮಹಿಳೆಯರು
ಗದಗ: ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿರುವುದರಿಂದ ಇಲ್ಲಿನ ಜನರು ವರುಣ ದೇವನಿಗೆ ಹಲವು ರೀತಿಯಲ್ಲಿ ಮೊರೆ ಹೋಗುತ್ತಾರೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನಿವಾಸಿಗಳು ಕೂಡ ಹೀಗೆ ಹತ್ತು ಹಲವು ಸಂಪ್ರದಾಯ, ಪೂಜೆ, ಆಚರಣೆಗಳನ್ನು ಮಾಡುತ್ತಾರೆ. ಈ ವರ್ಷ ಇಲ್ಲಿನ ಶ್ರೀನಗರದ ಮುಸ್ಲಿಂ ಮಹಿಳೆಯರು ವರುಣ ದೇವನನ್ನು ಸಂತೃಪ್ತಿಪಡಿಸಲು ಮಾರುತಿ ದೇವಸ್ಥಾನದಲ್ಲಿ ಹನುಮ ದೇವನ ಮೊರೆ ಹೋಗಿದ್ದಾರೆ.
ಈ ಪೂಜೆ ಕಾರ್ಯಕ್ರಮ ನಡೆದಿದ್ದು ಕಳೆದ ವಾರ, ಸೋಷಿಯಲ್ ಮೀಡಿಯಾದಲ್ಲಿ ಇದರ ಫೋಟೋ ವೈರಲ್ ಆದ ನಂತರ ಇದು ಪ್ರಚಾರಕ್ಕೆ ಬಂದಿದೆ. ಶ್ರೀನಗರ ನಿವಾಸಿಗಳು ಕಳೆದ ಶನಿವಾರ ಮಾರುತಿ ದೇವಸ್ಥಾನಕ್ಕೆ ಬಂದು ಈ ವರ್ಷ ಚೆನ್ನಾಗಿ ಮಳೆ-ಬೆಳೆಯಾಗಲಿ ಎಂದು ಹನುಮ ದೇವರಿಗೆ ಮೊರೆ ಹೋಗಿದ್ದಾರೆ. ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದವರಲ್ಲಿ ಮುಸ್ಲಿಂ ಮಹಿಳೆಯರು ಕೂಡ ಇದ್ದರು ಎನ್ನುವುದು ವಿಶೇಷ.
ಕಳೆದ ನಾಲ್ಕೈದು ವರ್ಷಗಳಿಂದ ನಮಗೆ ಸಾಕಷ್ಟು ಮಳೆ ಬಂದಿಲ್ಲ. ಹಿಂದೆ, ಇಲ್ಲಿನ ಜನರು ಜಾತಿ, ಮತ, ಧರ್ಮದ ಬೇಧಗಳಿಲ್ಲದೆ ಒಟ್ಟಿಗೆ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದರು. ಇಂದು ತಲೆಮಾರು ಬದಲಾಗಿದೆ. ಸಾಮರಸ್ಯ, ಒಗ್ಗಟ್ಟು ಕಾಪಾಡಿಕೊಳ್ಳಬೇಕಿದೆ. ನಾವು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡರೆ ದೇವರು ನಮ್ಮನ್ನು ಹರಸುತ್ತಾರೆ. ಹೀಗಾಗಿ ನಾವು ಮಾರುತಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸುತ್ತೇವೆ ಎನ್ನುತ್ತಾರೆ ರಂಜನಬಿ ಬದಿನ್.
ದೇವರೆಲ್ಲಾ ಒಂದೇ, ಇಲ್ಲಿ ಮೂರ್ತಿ, ದೇವಸ್ಥಾನ ನಿಮಿತ್ತ ಮಾತ್ರ ಎನ್ನುತ್ತಾರೆ ಕಟುನಾಬಿ ಮುಗಲಿ. ಹನುಮ ದೇವಸ್ಥಾನದಲ್ಲಿ ಬಂದು ನಾವು ಕೂಡ ಪೂಜೆಯಲ್ಲಿ ಭಾಗಿಯಾಗುತ್ತೇವೆ ಎಂದು ಮುಸಲ್ಮಾನ ಮಹಿಳೆಯರು ಕೇಳಿಕೊಂಡಾಗ ನಾವು ಸಂತೋಷದಿಂದ ಅವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದೆವು. ಅಲ್ಲಿ ವಿಶೇಷ ಪೂಜೆ ಮಾಡಿಸಿದರು. ಇಂತಹ ಮನೋಧರ್ಮ ಸಮಾಜಕ್ಕೆ ಒಳ್ಳೆಯದಾಗಿದ್ದು ಈ ಸುದ್ದಿ ಎಲ್ಲೆಡೆ ಹಬ್ಬಿದ್ದು ಒಳ್ಳೆಯದಾಯಿತು ಎನ್ನುತ್ತಾರೆ ಮೀನಾಕ್ಷಿ ಶಿವಶಿಂಪಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos