ರಾಜ್ಯ

ಧಾರವಾಡ: ಪುತ್ರ ಅಭಿಷೇಕ್ ಜೊತೆ ಹಾಲು, ತುಪ್ಪ ತುಲಾಭಾರ ಸೇವೆ ಸಲ್ಲಿಸಿದ ಸುಮಲತಾ ಅಂಬರೀಷ್

Sumana Upadhyaya
ಧಾರವಾಡ: ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಮತ್ತು ಅವರ ಪುತ್ರ ಅಭಿಷೇಕ್ ಹಾಲು ಮತ್ತು ತುಪ್ಪದ ತುಲಾಭಾರ ಸೇವೆ ಸಲ್ಲಿಸಿದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಮತ್ತು ಅಭಿಷೇಕ್ ಅವರ ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ತುಲಾಭಾರ ಸೇವೆ ಹಮ್ಮಿಕೊಂಡಿದ್ದರು. ಅಭಿಷೇಕ್ ಅವರು 100 ಕೆಜಿ ಸಕ್ಕರೆ, 15 ಕೆಜಿ ತುಪ್ಪ ಮತ್ತು ಸುಮಲತಾ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದ ತುಲಾಭಾರ ಸೇವೆ ಸಲ್ಲಿಸಿದರು.
ತುಲಾಭಾರ ಸೇವೆ ಮತ್ತು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನಾವು ಇದೇ ಮೊದಲ ಬಾರಿಗೆ ತುಲಾಭಾರ ಸೇವೆಯಲ್ಲಿ ಭಾಗವಹಿಸುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಲವರು ಹರಕೆ ಹೊತ್ತುಕೊಂಡಿದ್ದರು. ಏಳು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡಕ್ಕೆ ಬಂದಿದ್ದೆ. ಈಗ ಮತ್ತೆ ಬರುವ ಅವಕಾಶ ಸಿಕ್ಕಿದೆ. ಇಂದು ಕಾಲೇಜುಗಳಿಗೆ ಭೇಟಿ ಹಾಗೂ ಇತರ ಕೆಲವು ನಿಗದಿತ ಕಾರ್ಯಕ್ರಮಗಳಿವೆ ಎಂದರು.
ಅಂಬರೀಷ್ ಅಭಿಮಾನಿ ಉದ್ಯಮಿ ನಾರಾಯಣ ಕುಲಾಲ್ ತುಲಾಭಾರ ಆಯೋಜಿಸಿದ್ದರು. ದೇವಸ್ಥಾನದ ಪಾರುಪತ್ತೆದಾರ ಪಿ ಆರ್ ದೇಸಾಯಿ ಪೂಜೆ ನೆರವೇರಿಸಿದರು.
SCROLL FOR NEXT