ಬೆಂಗಳೂರು: ಕೇರಳ ಮೂಲದ 30 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಗೋಪು ದಾಸ್ ಹೆಬ್ಬಾಳದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆಯಾಗಿ ಐದು ವರ್ಷವಾದರೂ ತಮಗೆ ಮಕ್ಕಳಾಗಲಿಲ್ಲವೆಂದು ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ. ತಾವು ತಮ್ಮ ಪತ್ನಿಯನ್ನು ತೊರೆದು ಹೋಗುತ್ತಿದ್ದು ಆಕೆ ಭವಿಷ್ಯದಲ್ಲಿ ಸಂತೋಷವಾಗಿ ಬದುಕಲಿ ತಮ್ಮ ಆತ್ಮಹತ್ಯೆಯಿಂದ ಯಾರೂ ನೊಂದುಕೊಳ್ಳಬಾರದು, ಇದಕ್ಕೆ ಬೇರೆ ಯಾರೂ ಕಾರಣರಲ್ಲ ಎಂದು ಬರೆದುಕೊಂಡಿದ್ದಾರೆ.
ತಮ್ಮ ಸಹೋದ್ಯೋಗಿಯನ್ನು ಪ್ರೀತಿಸಿ ಗೋಪು ದಾಸ್ ವಿವಾಹವಾಗಿದ್ದರು. ಹಲವು ವರ್ಷಗಳಿಂದ ವಿ ನಾಗೇನಹಳ್ಳಿಯಲ್ಲಿ ವಾಸವಾಗಿದ್ದರು. ಕಳೆದ ಗುರುವಾರ ಪತ್ನಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗೋಪು ಆಫೀಸಿಗೆ ಹೋಗದೆ ಮನೆಯಲ್ಲಿ ಉಳಿದುಕೊಂಡಿದ್ದರು. ಫೋನ್ ನಲ್ಲಿ ಕಚೇರಿಯಿಂದ ಅವರ ಸಹೋದ್ಯೋಗಿಗಳು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲಿಲ್ಲ. ಆಗ ಅವರ ಪತ್ನಿಗೆ ಕರೆ ಮಾಡಿ ತಮ್ಮ ಪತಿ ಕರೆ ಸ್ವೀಕರಿಸುತ್ತಿಲ್ಲ ಎಂದಿದ್ದರು.
ಗೋಪು ಪತ್ನಿ ಮನೆಗೆ ಬಂದು ನೋಡಿದಾಗ ಅವರ ಮೃತದೇಹ ಫ್ಯಾನ್ ನಲ್ಲಿ ನೇತಾಡುತ್ತಿತ್ತು. ಹೆಬ್ಬಾಳ ಪೊಲೀಸರಿಗೆ ದೂರು ನೀಡಿದಾಗ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.