ಮಂಗಳೂರು: ಸಿಪಿಐನ ರಾಜ್ಯ ಮಟ್ಟದ ಹಿರಿಯ ನಾಯಕ ಹಾಗೂ ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯಾಧ್ಯಕ್ಷ ಬಿ. ಮಾಧವ ಅವರು ದೀರ್ಘಕಾಲದ ಅನಾರೋಗ್ಯದಿಂದ ನಗರದ ಪಡೀಲ್ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ನಿಧನ ಹೊಂದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಮಕ್ಕಳನ್ನು ಅಗಲಿದ್ದಾರೆ.
ಮಾಧವ ಅವರು ಸಿಪಿಎಂನ ರಾಜ್ಯ ಪೊಲಿಟ್ಬ್ಯುರೊ ಸದಸ್ಯರಾಗಿ ಮತ್ತು ಭಾರತೀಯ ಕಾರ್ಮಿಕ ಒಕ್ಕೂಟಗಳ ಕೇಂದ್ರ (ಸಿಐಟಿಯು) ರಾಜ್ಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ, ದಕ್ಷಿಣ ಕನ್ನಡ ಸಿಐಟಿಯು ಅಧ್ಯಕ್ಷರಾಗಿ ಹಾಗೂ ಬೀಡಿ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರು ವಿಮಾ ನೌಕರರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬಹಳ ಹಿಂದಿನಿಂದಲೂ ಕಾರ್ಮಿಕರ ಹೋರಾಟ ಎಡಪಂಥೀಯ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು.
ಮಾಧವ ಅವರ ನಿಧನ, ಕಾರ್ಮಿಕ ವರ್ಗ ನಡೆಸಿದ ಹೋರಾಟಕ್ಕೆ ಭಾರಿ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ನಡೆಸಿದ ಹೋರಾಟಗಳ ಮಧ್ಯೆಯೂ, ಮಾಧವ ಅವರು, ಅತ್ಯುತ್ತಮ ಅನುವಾದಕಾರರಾಗಿದ್ದರು. ಕಾರ್ಮಿಕ ಹೋರಾಟ, ಎಡಪಂಥೀಯ ಸಿದ್ಧಾಂತಗಳು ಮತ್ತಿತರ ವಿಷಯಗಳಲ್ಲಿ ಅನೇಕ ಪುಸ್ತಕಗಳನ್ನು ಬರದಿದ್ದಾರೆ.
ಹಿಂದೀ, ಇಂಗ್ಲೀಷ್, ಮಲಯಾಳಂನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ಪರಿಣಿತಿ ಹೊಂದಿದ್ದರು. ಬೀಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಹೋರಾಟಗಳ ಮುಂದಾಳತ್ವ ವಹಿಸಿದ್ದರು. ಬೀಡಿ ಕಾರ್ಮಿಕರು ಮತ್ತು ಕಾರ್ಖಾನೆಗಳ ಕಾರ್ಮಿಕರಲ್ಲಿ ನೀತಿ ಸಂಬಂಧಿತ ಜ್ಞಾನದ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ನಿರತರಾಗುತ್ತಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ ತಲೆದೋರಿದಾಗಲೆಲ್ಲಾ ಅದರ ವಿರುದ್ಧ ಧ್ವನಿ ಎತ್ತುತ್ತಿದ್ದರು. ಕೋಮು ಸಾಮರಸ್ಯ ಮೂಡಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ದಕ್ಷಿಣ ಕನ್ನಡದಲ್ಲಿ ಅನೇಕ ಹೋರಾಟಗಳು ಮತ್ತು ಕಾರ್ಯಕ್ರಮಗಳ ಮುಂದಾಳತ್ವ ವಹಿಸುತ್ತಿದ್ದ ಮಾಧವ ಅವರು ಅಪಾರ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಅಗಲಿದ್ದಾರೆ. ಅವರ ಅಗಲಿಕೆಯಿಂದ ಕಾರ್ಮಿಕ ಹೋರಾಟಕ್ಕೆ ದೊಡ್ಡ ನಷ್ಟವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos