ಹುಬ್ಬಳ್ಳಿ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ಸೀರೆಗೆ ಆಕಸ್ಮಿಕ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಹುಬ್ಬಳ್ಳಿಯ ಆದರ್ಶ ನಗರ ನಿವಾಸಿಯಾಗಿದ್ದ ಛಾಯಾ ನಾಗರಾಜ್ ಚಂದ್ರಶೇಖರಮಠ (49) ಮೃತ ಮಹಿಳೆಯಾಗಿದ್ದಾರೆ.ಇವರು ಕಳೆದೊಂದು ವಾರದಿಂದ ಸುಟ್ಟ ಗಾಯಗಳಿಂದ ಬಳಲುತ್ತಿದ್ದು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜೂನ್ 21ರಂದು ಹುಬ್ಬಳ್ಳಿಯ ಅಧ್ಯಾಪಕ ನಗರದ ವಿಶ್ವನಾಥ ಕಲ್ಯಾಣ ಮಂಟಪದ ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಛಾಯಾ ನಾಗರಾಜ್ ಅವರ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ಎಲ್ಲೆಡೆ ವ್ಯಾಪಿಸಿ ಅವರು ಗಾಯಗೊಂಡಿದ್ದರು.
ದೇವಸ್ಥಾನದಲ್ಲಿ ನಡೆದ ಆ ಘಟನೆ ಅಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು.ಶೇ.60 ರಷ್ಟು ಸುಟ್ಟ ಗಾಯವಾಗಿದ್ದ ಮಹಿಳೆ ಛಾಯಾ ನಾಗರಾಜ್ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.
ಘಟನೆಯ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.