ಬೆಂಗಳೂರು: ಮುಹ್ಮದ್ ಮನ್ಸೂರ್ ಖಾನ್ ಮಾಲೀಕತ್ವದ ತಿಲಕ್ ನಗರದ ಐಎಂಎ ಗೋಲ್ಡ್ ಕಂಪನಿ ಹಾಗೂ ಯಶವಂತಪುರ ಮಳಿಗೆಗಳ ಮೇಲೆ ಎಸ್ಐಟಿ ಮಂಗಳವಾರ ತೀವ್ರ ಕಾರ್ಯಚರಣೆ ನಡೆಸಿ 2.27ಕೆ.ಜಿ ಚಿನ್ನಾಭರಣ ಹಾಗೂ 26.5 ಕೆ.ಜಿ ಬೆಳ್ಳಿ ಸೇರಿ 83.26 ಲಕ್ಷ ರೂ ಮೌಲ್ಯದ ಆಭರಣಗಳನ್ನ ವಶಪಡಿಸಿಕೊಂಡಿದೆ.
ತಿಲಕ್ ನಗರದ ಐಎಂಎ ಗೋಲ್ಡ್ ಕಂಪನಿ ಮಳಿಗೆಯಿಂದ 41.60 ಲಕ್ಷ ರೂ ಮೌಲ್ಯದ 1 ಕೆ.ಜಿ 300 ಗ್ರಾಂ ಚಿನ್ನಾಭರಣ ಹಾಗೂ 2.20 ಲಕ್ಷ ರೂ ಮೌಲ್ಯದ 5.5 ಕೆ.ಜಿ. ತೂಕದ ಚಿನ್ನಾಭರಣ ಸೇರಿ 2 ಸಾವಿರ ನಗದು ವಶಪಡಿಸಿಕೊಂಡಿದೆ.
ಯಶವಂತಪುರದ ಗೋಲ್ಡ್ ಮಳಿಗೆಯಿಂದ 31.04 ಲಕ್ಷ ರೂ ಮೌಲ್ಯದ 970 ಗ್ರಾಂ ಚಿನ್ನಾಭರಣ ಹಾಗೂ 8.40 ಲಕ್ಷ ರೂ ಮೌಲ್ಯದ 21 ಕೆಜಿ ತೂಕದ ಬೆಳ್ಳಿ ವಸ್ತು ಗಳು ಜಪ್ತಿ ಮಾಡಿಕೊಳ್ಳಲಾಗಿದೆ
ನ್ಯಾಯಾಲಯದ ಅನುಮತಿ ಪಡೆದು ಬೆಳಿಗ್ಗೆ ಒಂಬತ್ತರಿಂದ ರಾತ್ರಿವರೆಗೆ ತಿಲಕ್ ನಗರ ಹಾಗೂ ಯಶವಂತಪುರ ಮಳಿಗೆಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಒಟ್ತಾರೆ 83.24 ಲಕ್ಷ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
"ಪ್ರಮುಖ ಆರೊಪಿ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ತನಿಖೆ ಚುರುಕುಗೊಂಡಿದೆ. ಕಂಪನಿ ಹಾಗೂ ಆತನ ಹೆಸರಲ್ಲಿರುವ ಆಸ್ತಿಗಳ ಪಟ್ಟಿ ತಯಾರಿಸಿದ್ದೇವೆ. ನ್ಯಾಯಾಲಯದ ಅನುಮತಿ ಪಡೆದು ಒಂದೊಂದರ ಮೇಲೆ ದಾಳಿ ಮಾಡಲಾಗುವುದು. ಎಸ್.ಐ.ಟಿ. ತಂಡದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.
ಇನ್ನು ಐಎಂಎ ಹಗರಣದ ಇದುವರೆಗಿನ ತನಿಖಾ ಪ್ರಗತಿಯ ಕುರಿತು ಅಧಿಕಾರಿಗಳು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸೋಮವಾರ ರವಿಕಾಂತೇಗೌಡ ನೇತೃತ್ವದ ತಂಡ ಸಚಿವ ಎಂಬಿ ಪಾಟೀಲ್ ಜತೆಗೆ ಐಎಂಎ ಕಂಪನಿ ಹಾಗೂ ಖಾನ್ ಗೆ ಸೇರಿದ ಆಸ್ತಿ ಮುಟ್ಟುಗೋಲು ಸಂಬಂಧ ಚರ್ಚೆ ನಡೆಸಿದೆ. ಮಸೂರ್ ಖಾನ್ ಪರಾರಿ ಪ್ರಕರಣ ಕುರಿತು ಈ ತಿಂಗಳು ನಡೆವ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗುವ ನಿರೀಕ್ಷೆ ಇದೆ.