ಬೆಂಗಳೂರು: ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿಕರ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದ ಆರೋಪದಡಿ ಬಂಧಿತರಾಗಿದ್ದ ವ್ಯಕ್ತಿ ಪರ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ, "ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪ್ರಜಾಪ್ರಭುತ್ವದ ಬದಲು "ಪೋಲೀಸ್ ರಾಜ್" ಜಾರಿಯಲ್ಲಿದೆ" ಎನ್ನುವ ಮೂಲಕ ಪೋಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
‘ಟ್ರೋಲ್ ಮಗಾ’ ಎಂಬ ಸೋಷಿಯಲ್ ಮೀಡಿಯಾ ಗುಂಪಿನ ಇಂಜಿನಿಯರ್ ಮತ್ತು ನಿರ್ವಾಹಕ ಎಸ್ ಜೈಕಾಂತ್ ಎಂಬುವವರು ಸಿಎಂ ವಿರುದ್ಧ ಮಾನಹಾನಿಕರ ಪೋಸ್ಟ್ ಮಾಡಿದ್ದ ಆರೋಪ ಹೊಂದಿದ್ದರು. ಇದರಲ್ಲಿ ಮೊದಲ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೂ ಆತನ ವಿರುದ್ಧ ಎರಡನೇ ಎಫ್ಐಆರ್ ದಾಖಲಿಸಿಪೋಲೀಸರು ಅವರನ್ನು ಬಂಧಿಸಿದ್ದರು.
ಜೈಕಾಂತ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಪೊಲೀಸರ ನಡವಳಿಕೆ ಸಂಪೂರ್ಣವಾಗಿ ಕಾನೂನು ಉಲ್ಲಂಘನೆ ಎಂದು ಆರೋಪಿಸಿದರು, ಆರೋಪಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿ ರಾಜ್ಯದಲ್ಲಿ "ಪೊಲೀಸ್ ರಾಜ್" ಜಾರಿಯಾದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.