ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ರುವಾರಿ ಮೊಹಮ್ಮದ್ ಮನ್ಸೂರ್ ಖಾನ್ ಗೆ ಅಲ್ಪಸಂಖ್ಯಾತ ಸಚಿವ ಜಮೀರ್ ಅಹ್ಮದ್ ಖಾನ್ ಆಸ್ತಿ ಮಾರಾಟ ಮಾಡಿದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಸಚಿವರಿಗೆ ಸಮನ್ಸ್ ಜಾರಿ ಮಾಡಿದೆ.
ಜಮೀರ್ ಅವರ ಸರ್ಕಾರಿ ನಿವಾಸಕ್ಕೆ ತೆರಳಿದ ಇಡಿ ಅಧಿಕಾರಿಗಳು, ಸಮನ್ಸ್ ಜಾರಿ ಮಾಡಿದ್ದು, ಜುಲೈ 5ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಮೀರ್ ಅಹ್ಮದ್ ಖಾನ್, ಇಡಿ ಅಧಿಕಾರಿಗಳು ನನ್ನ ಮನೆಗೆ ಭೇಟಿ ನೀಡಿದ್ದು, ಜುಲೈ 5ರೊಳಗೆ ಐಎಂಎ ಗೆ ಮಾರಾಟ ಮಾಡಿರುವ ಆಸ್ತಿಗೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ನೋಟಿಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇದ್ದು, ಅದನ್ನು ಸಕಾಲದಲ್ಲಿ ಇಡಿಗೆ ಒದಗಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
2017 ರಲ್ಲಿ ಆಸ್ತಿ ಮಾರಿ ಅದರ ತೆರಿಗೆಯನ್ನೂ ಕಟ್ಟಿದ್ದೇನೆ. ಇದರಲ್ಲಿ ಇಡಿ ಏಕೆ ಭಾಗಿಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಇಡಿಯವರು ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ತೆಗೆದುಕೊಳ್ಳುವುದು ನನ್ನ ಕರ್ತವ್ಯ ತೆಗೆದುಕೊಂಡಿದ್ದೇನೆ. ವಿಚಾರಣೆಗೆ ಹಾಜರಾಗಿ ಆಸ್ತಿ ಮಾರಾಟದ ವಿವರಣೆಯನ್ನು ಕೊಡುತ್ತೇನೆ. ಮನ್ಸೂರ್ ಖಾನ್ ಜೊತೆ ತಮಗೆ ಆಸ್ತಿ ಮಾರಾಟ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ರೀತಿಯ ವ್ಯವಹಾರವಾಗಲೀ, ಸಂಬಂಧವಾಗಲೀ ಇಲ್ಲ. ಈ ಪ್ರಕರಣದಲ್ಲಿ ಸಿಬಿಐ ಪ್ರವೇಶವಾದರೆ ತಮಗೆ ಇನ್ನೂ ಸಂತೋಷವಾಗುತ್ತದೆ. ಯಾರಾದರೂ ತನಿಖೆ ಮಾಡಲಿ ಒಟ್ಟಿನಲ್ಲಿ ಬಡವರಿಗೆ ನ್ಯಾಯ ಸಿಗಬೇಕು ಎಂದರು.