ಬೆಂಗಳೂರು: ಪಾಕ್ ವಶದಲ್ಲಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ತವರಿಗೆ ವಾಪಸ್ ಆಗಿದ್ದು, ಅಭಿನಂದನ್ ವಾಪಸಾತಿಗೆ ರಾಜ್ಯ ರಾಜಕೀಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವಿಚಾರಾಗಿ ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ, 'ನಮ್ಮ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಿಂದ ವಾಪಸ್ಸಾಗಿದ್ದು ಸಂತೋಷ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
'ಪೈಲಟ್ ಅಭಿನಂದನ್ ಅವರ ಧೈರ್ಯ, ಕ್ಲಿಷ್ಟಕರ ಸಮಯದಲ್ಲೂ ಅವರ ಕಾರ್ಯಬದ್ಧತೆ ಪ್ರಶಂಸನೀಯ. ಭಾರತಾಂಬೆ ಪುತ್ರನ ಕೆಚ್ಚೆದೆಯ ಸಾಹಸಕ್ಕೆ ನಾವು ಹೆಮ್ಮೆ ಪಡುತ್ತೇವೆ. ಇಡೀ ರಾಷ್ಟ್ರವೇ ಅವರ ಶೌರ್ಯಕ್ಕೆ ಸಲಾಂ ಹೊಡೆಯುತ್ತದೆ. ತವರು ನಾಡಿಗೆ ಆಗಮಿಸಿದ ಅಭಿನಂದನ್ರಿಗೆ ಸ್ವಾಗತ' ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅಂತೆಯೇ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರೂ ಕೂಡ ಟ್ವೀಟ್ ಮೂಲಕ ಅಭಿನಂದನ್ ಅವರನ್ನು ಸ್ವಾಗತಿಸಿದ್ದಾರೆ.