ಹಾವೇರಿ: ಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವಲ್ಲ. ರಾಹುಲ್ ಗಾಂಧಿ ವರ್ಸಸ್ ನರೇಂದ್ರ ಮೋದಿಯೂ ಅಲ್ಲ. ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಿ ಧೋರಣೆ ನಡುವೆ ನಡೆಯುತ್ತಿರುವ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ಮುನಿಸಿಪಲ್ ಮೈದಾನದಲ್ಲಿ ಪರಿವರ್ತನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆ ಪಕ್ಷ ಪಕ್ಷಗಳ ನಡುವಿನ ಹೋರಾಟವಲ್ಲ. ಬದಲಿಗೆ ಇದು ಸೈದ್ಧಾಂತಿಕತೆಯ ಹೋರಾಟವಾಗಿದೆ ಎಂದು ಸಿದ್ದರಾಮಯ್ಯ ಬಣ್ಣಿಸಿದರು.
ಇತ್ತೀಚೆಗೆ ರಾಜ್ಯಕ್ಕೆ ಎರಡು ಭಾರಿ ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಆದರೆ ರಾಜ್ಯದ ಅಭಿವೃದ್ದಿ, ಸಮಸ್ಯೆಗಳ ಬಗ್ಗೆ ಒಂದೂ ದಿನವೂ ಮಾತನಾಡಿಲ್ಲ. ಬದಲಾಗಿ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಜನರನ್ನು ದಾರಿ ತಪ್ಪಿಸುತ್ತಾರೆ ಎಂದರು.
ಅಚ್ಚೇದಿನ್ ಆಯೇಗಾ ಎಂದು ಪ್ರಧಾನಿ ಹೇಳಿದ್ದರು. 5 ವರ್ಷ ಅವಧಿ ಮುಗಿದರೂ ಜನರಿಗೆ ಅಚ್ಚೇದಿನ್ ಬರಲಿಲ್ಲ. ಅಂಬಾನಿ, ಅದಾನಿ, ನೀರವ್ ಮೋದಿ, ವಿಜಯ್ ಮಲ್ಯಗೆ ಅವರಿಗೆ ಅಚ್ಚೇದಿನ್ ಬಂದಿದೆ ಎಂದು ವ್ಯಂಗ್ಯವಾಡಿದರು.
ಈ ಚುನಾವಣೆಯಲ್ಲಿ ಅಭಿವೃದ್ದಿ ಮತ್ತು ಅಭಿವೃದ್ಧಿ ಪೂರಕ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು. ರೈತರ ಸಾಲಮನ್ನಾ ಮಾಡಲಿಲ್ಲ. ಬದಲಾಗಿ ರೈತರಿಗೆ ಖಾತೆಗೆ 2,000 ರೂ ಜಮಾ ಮಾಡುವುದಾಗಿ ಮೋದಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಮೊದಲ ನಾಲ್ಕು ವರ್ಷಗಳಲ್ಲಿ ಮಾಡಲಿಲ್ಲ. ಚುನಾವಣೆ ಅಂತಿಮ ಕ್ಷಣದಲ್ಲಿ ರೈತರ ಖಾತೆಗೆ ಹಣ ಹಾಕುವ ಮತ್ತು ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿ ಕೃಷಿಕ್ ಸಮ್ಮಾನ್ ಯೋಜನೆ ಬಗ್ಗೆ ಸಿದ್ದರಾಮಯ್ಯ ಕಿಡಿ ಕಾರಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎರಡು ಭಾರಿ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ದು ಸಾಲ ಮನ್ನಾ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿದೆವು. ಆದರೆ ಬಿಜೆಪಿಯ ಒಬ್ಬ ನಾಯಕರು ಪ್ರಧಾನಿ ಬಳಿ ತುಟಿ ಪಿಟಿಕ್ ಎನ್ನಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾಲಮನ್ನಾ ಮಾಡಲು ನಮ್ಮ ಬಳಿನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎಂದು ಉತ್ತರ ನೀಡಿದ್ದರು. ಬಿಜೆಪಿಯವರಿಗೆ ರೈತರ ಬಗ್ಗೆ ಕಳಕಳಿ, ಕಾಳಜಿ ಎರಡೂ ಇಲ್ಲ. ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ ಅವರನ್ನು ನಂಬದಿರಿ ಎಂದರು.
ಮಾಜಿ ಸಚಿವ ಸಿ.ಎಂ.ಉದಾಸಿ ಹಾಗೂ ಅವರ ಮಗ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಕ್ಷೇತದಲ್ಲಿ ಒಂದೂ ಅಭಿವೃದ್ದಿ ಕೆಲಸ ಮಾಡಿಲ್ಲ ಜನರಿಗೆ ಟೋಪಿ ಹಾಕಿ ಗೆದ್ದು ಬಂದಿದ್ದಾರೆ. ಜನರಿಗೆ ಉಪಯೋಗ ಆಗದ ಸಂಸದ ಶಿವಕುಮಾರ್ ಉದಾಸಿ ಅವರನ್ನು ಮನೆಗೆ ಕಳುಹಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos